ನವದೆಹಲಿ: ಜಲಮಂಡಳಿಗೆ ನೀರಿನ ಟ್ಯಾಂಕರ್ಗಳನ್ನು ಬಾಡಿಗೆ ಕೊಟ್ಟಿದ್ದಕ್ಕಾಗಿ ಆಡಳಿತಾರೂಢ ಪಕ್ಷದ ಶಾಸಕ ಮತ್ತಾತನ ಸಹಚರರು ಕಿರುಕುಳ ನೀಡಿದ್ದರಿಂದ ವ್ಯದ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೆಹಲಿಯ ವೈದ್ಯ ರಾಜೇಂದ್ರ ಸಿಂಗ್ (52) ಆತ್ಮಹತ್ಯೆ ಮಾಡಿಕೊಂಡವರು. ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಶಾಸಕ ಮತ್ತು ಆತನ ಸಹಚರನ ಕಿರುಕುಳದಿಂದ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಎರಡು ಪುಟದ ಡೆತ್ ನೋಟ್ ಬರೆದಿಟ್ಟಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದೆಹಲಿಯ ನೇಬ್ ಸರಾಯ್ ಪ್ರದೇಶದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು. ಇವರು ನೀರಿನ ಟ್ಯಾಂಕರ್ ಸರ್ವಿಸ್ ವ್ಯವಹಾರವನ್ನೂ ಹೊಂದಿದ್ದರು. ದೆಹಲಿ ಜಲಬೋರ್ಡ್ಗೆ ಇವರು ತಮ್ಮ ಟ್ಯಾಂಕರ್ಗಳನ್ನು ಬಾಡಿಗೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ತಮಗೆ ಹಣ ಕೊಡಬೇಕು. ಇಲ್ಲವಾದಲ್ಲಿ ದೆಹಲಿ ಜಲನಿಗಮಕ್ಕೆ ಕೊಟ್ಟಿರುವ ಟ್ಯಾಂಕರ್ಗಳ ಬಾಡಿಗೆ ಕರಾರನ್ನು ರದ್ದುಗೊಳಿಸುವುದಾಗಿ ಆಮ್ ಆದ್ಮಿ ಪಕ್ಷದ ದೇವ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಕಾಶ್ ಜರ್ವಾಲ್ ಮತ್ತು ಆತನ ಸಹಚರ ಕಪಿಲ್ ನಗರ್ ಕಿರುಕುಳ ಕೊಡುತ್ತಿದ್ದರು. ಅಲ್ಲದೆ, ಜೀವ ಬೆದರಿಕೆ ಕರೆಗಳು ಕೂಡ ಬರುತ್ತಿದ್ದವು ಎಂದು ತಾವು ಬರೆದಿಟ್ಟಿರುವ ಡೆತ್ ನೋಟ್ನಲ್ಲಿ ರಾಜೇಂದ್ರ ಸಿಂಗ್ ವಿವರಿಸಿದ್ದಾರೆ.
ಈ ಕಿರುಕುಳ ಸಹಿಸಲಾಗದೆ ತಾವು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಗಿ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶಾಸಕ ಜರ್ವಾಲ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
2018ರಲ್ಲಿ ಕೂಡ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದ ಜರ್ವಾಲ್ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದರು. ಈ ಬಗ್ಗೆ ಕೂಡ ಅವರ ವಿರುದ್ಧ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ.
ಅಮೆರಿಕದಲ್ಲಿ ಕೋವಿಡ್ 19ನಿಂದ ಆಗಸ್ಟ್ವರೆಗೆ ಎಷ್ಟು ಜನ ಸಾಯಬಹುದು ಗೊತ್ತೇ? ಇಟಲಿ, ಸ್ಪೇನ್, ಬ್ರಿಟನ್ ಸ್ಥಿತಿಗತಿಯೇನು?