ಹರಪನಹಳ್ಳಿ: ಕರೊನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಪಟ್ಟಣದಲ್ಲಿ ಸೋಮವಾರ ಪತ್ರಕರ್ತರ ಆರೋಗ್ಯ ತಪಾಸಣೆ ನಡೆಸಲಾಯಿತು.
ಜ್ವರ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ.ಇನಾಯಿತ್ ಉಲ್ಲಾ ಹಾಗೂ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶಿವಶಂಕರ ನೇತೃತ್ವದಲ್ಲಿ ತಪಾಸಣೆ ಮಾಡಲಾಯಿತು.
ಪ್ರತಿಯೊಬ್ಬರ ಜ್ವರ, ಬಿಪಿ, ತಾಪಮಾನ, ಸಂಚಾರದ ವಿವರಗಳನ್ನು ಪಡೆಯಲಾಯಿತು. ಕೆಮ್ಮು, ಜ್ವರ, ನೆಗಡಿ ಕಾಣಿಸಿಕೊಂಡರೆ ಕೂಡಲೇ ಪರೀಕ್ಷೆಗೆ ಒಳಪಡಬೇಕು. ಯಾರಿಗಾದರೂ ಈ ಲಕ್ಷಣಗಳು ಕಂಡು ಬಂದರೂ ಅವರನ್ನು ಇಲ್ಲಿಗೆ ಕಳುಹಿಸಿಕೊಡುವಂತೆ ವೈದ್ಯರು ಸಲಹೆ ನೀಡಿದರು.
ಸಾಧಾರಣ ಕಾಯಿಲೆ ಎಂದು ನಿರ್ಲಕ್ಷಿಸದೆ, ಔಷಧಿ ಅಂಗಡಿಗಳಲ್ಲಿ ಮಾತ್ರೆಗಳನ್ನು ಪಡೆದುಕೊಳ್ಳದೆ ವೈದ್ಯರಿಂದಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸದಾ ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುಂದರಿಂದ ಸುರಕ್ಷಿತವಾಗಿರಬಹುದು ಎಂದು ವೈದ್ಯರು ಕಿವಿಮಾತು ಹೇಳಿದರು.