ಚೇಕ್ಪೋಸ್ಟ್ ನಿರ್ಮಿಸುವಂತೆ ತಹಸೀಲ್ದಾರ್ ಸೂಚನೆ | ಕರೊನಾ ಭೀತಿ ಹಿನ್ನೆಲೆಯಲ್ಲಿ ಕ್ರಮ
ಹನುಮಸಾಗರ: ಸಮೀಪದ ಕಬ್ಬರಗಿ ಗ್ರಾಮದ ಕಪಿಲತೀರ್ಥ ಜಲಪಾತಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದ್ದು, ಚೆಕ್ಪೋಸ್ಟ್ ನಿರ್ಮಿಸುವಂತೆ ತಹಸೀಲ್ದಾರ್ ಎಂ.ಸಿದ್ದೇಶ ತಿಳಿಸಿದರು.
ಭಾನುವಾರ ಜಲಪಾತಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಈ ಜಲಪಾತ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾಗಿದ್ದು, ಮಳೆಯಾದರೆ ನೀರು ಬೀಳುವ ದೃಶ್ಯ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧಡೆಯಿಂದ ಪ್ರವಾಸಿಗರು ಬರುತ್ತಾರೆ. ಆದರೆ, ಕರೊನಾ ದೇಶದಾದ್ಯಂತ ವ್ಯಾಪಿಸಿದ್ದರಿಂದ ಪ್ರವಾಸಿಗರು ಬರುವುದನ್ನು ನಿಷೇಧಿಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಆದ್ದರಿಂದ ಗ್ರಾಮಸ್ಥರ ಆರೋಗ್ಯ ದೃಷ್ಠಿಯಿಂದ ಹಾಗೂ ಕರೊನಾ ವೈರಸ್ ಹರಡುವುದನ್ನು ತಡೆಯಲು ಪ್ರವಾಸಿಗರ ಪ್ರವೇಶ ನಿರ್ಭಂಧಿಸಲಾಗುವುದು. ಜಲಪಾತಕ್ಕೆ ಬರುವ ರಸ್ತೆಯಲ್ಲಿ ಚೆಕ್ಪೋಸ್ಟ್ ನಿರ್ಮಿಸಿ ಪ್ರವಾಸಿಗರು ಬಾರದಂತೆ ನೋಡಿಕೊಳ್ಳಲಾಗುವುದು ಎಂದರು.
ರಸ್ತೆಯಲ್ಲಿ ಚೆಕ್ಪೋಸ್ಟ್ ನಿರ್ಮಿಸಿ ಯಾರೂ ಪ್ರವೇಶ ಮಾಡದಂತೆ ನೋಡಿಕೊಳ್ಳಬೇಕೆಂದು ಪಿಎಸ್ಐ ಅಮರೇಶ ಹುಬ್ಬಳ್ಳಿಗೆ ತಿಳಿಸಿದರು. ಗ್ರಾಪಂ ಅಧ್ಯಕ್ಷ ಮಹಾಂತೇಶ ವಜ್ಜಲ್, ಗ್ರಾಮ ಲೆಕ್ಕಾಧಿಕಾರಿ ವೇಲಪ್ಪನ್, ಅರಣ್ಯ ರಕ್ಷಕ ದಾನನಗೌಡ ಪಾಟೀಲ, ಪಿಡಿಒ ನಿಂಗಪ್ಪ ಮೂಲಿಮನಿ, ಪೊಲೀಸ್ ಪೇದೆ ಎಸ್.ಎಸ್. ನವಲಿ ಇತರರಿದ್ದರು.