ಹನುಮಸಾಗರ: ಕಳೆದ ಒಂದು ತಿಂಗಳಿಂದ ನಿಧಾನವಾಗಿ ಬೀಳುತ್ತಿದ್ದ ಕಪಿಲತೀರ್ಥ ಜಲಪಾತ ಗುರುವಾರ ನಸುಕಿನ ಜಾವ ಸುರಿದ ಮಳೆಗೆ ರಭಸವಾಗಿ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಕಬ್ಬರಗಿ ಗ್ರಾಮದ ಕಪಿಲತೀರ್ಥ ಜಲಪಾತ ಮಿನಿಜೋಗವೆಂದು ಹೆಸರು ಪಡೆದಿದ್ದು, ಕಲ್ಯಾಣ ಕರ್ನಾಟಕದ ಏಕೈಕ ಜಲಪಾತ ಎಂದೇ ಪ್ರಸಿದ್ಧಿ ಪಡೆದಿದೆ. ಒಂದು ತಿಂಗಳಿಂದ ನಿಧಾನವಾಗಿ ಹರಿಯುತ್ತಿದ್ದ ಜಲಪಾತಕ್ಕೆ ಜೀವ ಕಳೆ ಬಂದಿದ್ದು, ನೀರು ರಭಸವಾಗಿ ಬೀಳುತ್ತಿದೆ.ಬೆಟ್ಟದ ತಪ್ಪಲಿನಲ್ಲಿ 25 ಅಡಿ ಎತ್ತರದಿಂದ ರಭಸವಾಗಿ ಬೀಳುವ ನೀರಿನ ಕೆಳಗೆ ಜನರು ಸ್ನಾನ ಮಾಡಿ ಮಜಾ ಅನುಭವಿಸುತ್ತಿದ್ದಾರೆ. ನೀರು ಬೀಳುವ ಅಡಿಯಲ್ಲಿ ನಿಸರ್ಗವೇ ಹಾಸು ಬಂಡೆಯನ್ನು ನಿರ್ಮಿಸಿರುವುದರಿಂದ ಬಂಡೆಗೆ ಅಪ್ಪಳಿಸಿದ ನೀರು ಪಕ್ಕದಲ್ಲಿ ನಿಂತ ಜನರಿಗೆ ಚಿಮ್ಮಿ ಹಿತಾನುಭವ ನೀಡುತ್ತಿದೆ. ಭೋರ್ಗೆರೆದು ಬೀಳುವ ನೀರು ನೋಡುಗರ ಕಣ್ಮನ ತಣಿಸುತ್ತಿದೆ.