ಹನುಮಸಾಗರ: ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಯಶಸ್ವಿಗೊಳಿಸಲು ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.
ಸಮೀಪದ ಮಿಯ್ಯಪುರ ಗ್ರಾಮದಲ್ಲಿ ಸೋಮವಾರ ಸರ್ಕಾರಿ ಶಾಲೆ ಶೌಚಗೃಹ, ಅಂಗನವಾಡಿ ಕೊಠಡಿ, ಸ್ಮಾರ್ಟ್ಕ್ಲಾಸ್ ಉದ್ಘಾಟನೆ ಹಾಗೂ ಬಿಸಿಯೂಟ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಊರಿನ ಜನರಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು. ನರೇಗಾದಡಿ 3 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ನಿರ್ಮಿಸಿದ್ದು, ಬಯಲು ಬಹಿರ್ದೆಸೆಗೆ ಹೋಗದೆ, ಶೌಚಗೃಹ ಬಳಸಬೇಕು ಎಂದರು.
ಸಾಮಗ್ರಿ ದೇಣಿಗೆ: ಇಳಕಲ್ ಪಟ್ಟಣದ ಕೆಎಸ್ಎನ್ಸಿಎಲ್ ಸಂಸ್ಥೆಯಿಂದ 4.5 ಲಕ್ಷ ರೂ. ವೆಚ್ಚದಲ್ಲಿ ಡೆಸ್ಕ್, ಪ್ರೊಜೆಕ್ಟರ್, ಅಲ್ಮರಾ, ಶುದ್ಧ ನೀರಿನ ಘಟಕ, ವಿಜ್ಞಾನ ಪ್ರಯೋಗಾಲಯದ ಸಾಮಗ್ರಿ ಹಾಗೂ ಲ್ಯಾಪ್ಟಾಪ್ ಶಾಲೆಗೆ ದೇಣಿಗೆ ನೀಡಲಾಯಿತು. ಹೀಗಾಗಿ ಸಂಸ್ಥೆಯ ಪ್ರಧಾನ ವ್ಯಸ್ಥಾಪಕ ಗುಂಡಪ್ಪ, ಅಧೀಕ್ಷಕ ವಿಠ್ಠಲ್, ಸಿಬ್ಬಂದಿ ವಿ.ಸಾಬ್, ಪರಶುರಾಮರನ್ನು ಗ್ರಾಮಸ್ಥರು ಸನ್ಮಾನಿಸಿದರು.