ಬೆಂಗಳೂರು: ಕರ್ನಾಟಕ ಕಳೆದ 70 ವರ್ಷಗಳಲ್ಲಿ ಸಾಕಾರ ಮಾಡಿಕೊಳ್ಳಲು ಸಾಧ್ಯವಾಗದ ದೊಡ್ಡ ದೊಡ್ಡ ಕನಸುಗಳನ್ನು ಪ್ರಸ್ತುತ ಸಾಕಾರ ಮಾಡಿಕೊಂಡಿದೆ. ಭಾಷೆ ಎಂದು ಬಂದಾಗ ತಮಿಳುನಾಡಿನಲ್ಲಿ ಎಲ್ಲ ಪಕ್ಷಗಳು ಒಗ್ಗಟ್ಟಾಗುತ್ತಿದ್ದವು. ಇಂತಹ ಒಗ್ಗಟ್ಟು ರಾಜ್ಯದಲ್ಲಿ ಕೊರತೆಯಾಗಿ ಕಾಣುತ್ತಿತ್ತು. ಇಂದಿನ ದಿಟ್ಟ ಸರ್ಕಾರ ಕನ್ನಡದ ಧ್ವಜಕ್ಕೆ ಸಿಂಧುತ್ವ ತಂದು ಕೊಟ್ಟಿದೆ. ಪ್ರಪಂಚಕ್ಕೆ ಪ್ರಜಾಪ್ರಭುತ್ವ ಎಂದರೆ ಏನೆಂಬುದರ ಬಗ್ಗೆ ಬೀಜ ಬಿತ್ತಿದ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಾಭಾರಿ ಎಂದು ಘೋಷಿಸಿದೆ. ಕನ್ನಡ ಅಕ್ಷರಗಳು ಫಲಕಗಳಲ್ಲಿ ಇರಬೇಕು, ಇಲ್ಲದಿದ್ದರೆ ಪರವಾನಗಿ ರದ್ದಾಗುತ್ತದೆ ಎಂಬ ದಿಟ್ಟ ಆಜ್ಞೆ ಹೊರಡಿಸಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ಬಸವಣ್ಣನವರ ಮುಂದುವರಿದ ಭಾಗವಾಗಿ, ಅಂಬೇಡ್ಕರ್ ಅವರ ಮುಂದಿನ ಧ್ವನಿಯಾಗಿ ಕನ್ನಡ ನಾಡಿನ ಎಲ್ಲ ಗುರುತುಗಳನ್ನು ಗಟ್ಟಿಯಾಗಿಸುತ್ತಿದ್ದಾರೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಬಣ್ಣಿಸಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಿಜಯ ಮ್ಯೂಸಿಕ್ ಸ್ಕೂಲ್ ಶುಕ್ರವಾರ ಆಯೋಜಿಸಿದ್ದ 25ನೇ ವರ್ಷದ ಸಪ್ತಸ್ವರ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.