ಕಂಪ್ಲಿ: ಸಮೀಪದ ಹಳೇ ದರೋಜಿ ಗ್ರಾಮದ ಹೊಲವೊಂದರಲ್ಲಿ ಮಲಿಯಪ್ಪ ಸಿದ್ದಪ್ಪನವರಿಗೆ ಸೇರಿದ ಕುರಿ ಮಂದೆ ಮೇಲೆ ಗುರುವಾರ ರಾತ್ರಿ ಚಿರತೆ ದಾಳಿ ಮಾಡಿದ್ದು, ಐದು ಕುರಿ ಮರಿಗಳನ್ನು ಬಲಿ ಪಡೆದಿದೆ.
ರಾತ್ರಿ 8.30ರ ಸುಮಾರಿಗೆ ಚಿರತೆ ದಾಳಿ ಮಾಡಿದ್ದು, ನಾಲ್ಕು ಕುರಿಮರಿಗಳು ಮಾರಣಾಂತಿಕ ಗಾಯಗಳಿಂದ ಸತ್ತಿವೆ. ಒಂದು ಕುರಿಮರಿಯನ್ನು ಚಿರತೆ ಭಾಗಶಃ ತಿಂದು ಹಾಕಿದೆ.
ಇದರ ದಾಳಿಯಿಂದ ತಪ್ಪಿಸಿಕೊಳ್ಳಲು ಕುರಿಗಾಹಿ ಮಲಿಯಪ್ಪ ಓಡಿ ಹೋಗಿ ಸನಿಹದಲ್ಲಿದ್ದ ಮಾರೆಮ್ಮ ಗುಡಿ ರಕ್ಷಣೆ ಪಡೆದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಬಳ್ಳಾರಿಯ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳ್ಳಾರಿ ವಲಯ ಅರಣ್ಯಾಧಿಕಾರಿ ಮಂಜುನಾಥ ಮಾತನಾಡಿ, ಸಂತಾನೋತ್ಪತ್ತಿಯ ಋತುವಾಗಿದ್ದರಿಂದ ಸಾಮಾನ್ಯವಾಗಿ ಚಿರತೆಗಳು ಆಹಾರ ಅರಸಿ ಗ್ರಾಮದತ್ತ ಬಂದಿರುವ ಸಾಧ್ಯತೆಗಳಿವೆ. ಚಿರತೆಯ ಚಲನವಲನ ಗುರುತಿಸಲಾಗುವುದು. ನಂತರ ಬೋನು ಇರಿಸುವ ಕುರಿತು ನಿರ್ಧರಿಸಲಾಗುವುದು. ಗ್ರಾಮಸ್ಥರು ಹೊಲಗದ್ದೆಗಳಿಗೆ ಒಬ್ಬರೇ ತೆರಳಬಾರದು. ರಾತ್ರಿ ಪ್ರಖರ ಬೆಳಕು ಬೀರುವ ಸಾಧನಗಳನ್ನು ಬಳಸಬೇಕು ಎಂದು ತಿಳಿಸಿದರು.