ಮೈಸೂರು: ನನ್ನ ಹೆಸರು ಹಾಳು ಮಾಡುವ ಹುನ್ನಾರದಲ್ಲಿ ನಾನು ಟ್ರ್ಯಾಪ್ ಆಗಿದ್ದೇನೆ. ಅದು ಸಿದ್ದರಾಮಯ್ಯನವರ ಪೂರ್ವ ನಿಯೋಜಿತ ಟ್ರ್ಯಾಪ್ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಟ್ರ್ಯಾಪ್ ಆಗಿದ್ದು ಸತ್ಯ. ದೇವೇಗೌಡರ ಎಮೋಷನಲ್ ಟ್ರ್ಯಾಪ್ನಿಂದಲೂ ನಮ್ಮ ಶಕ್ತಿ ಕುಂದಿತು. ಕಳೆದ ಮೂರು ಚುನಾವಣೆಯಲ್ಲಿ ನಾವು ಯಾರ ಹಂಗು ಇಲ್ಲದೆ 40 ಸೀಟು ಪಡೆಯುತ್ತಿದ್ದೆವು. ಆದ್ರೆ, ಕಾಂಗ್ರೆಸ್ ಸಹವಾಸ ಮಾಡಿ ನಮ್ಮ ಪಕ್ಷದ ಶಕ್ತಿ ಕಡಿಮೆ ಆಯ್ತು ಎಂದು ಎಚ್ಡಿಕೆ ಹೇಳಿದರು.
ಸಿದ್ದರಾಮಯ್ಯ ಯಾರನ್ನು ಕದ್ದುಮುಚ್ಚಿ ಭೇಟಿ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿದೆ. ನಾನು ಎಲ್ಲರನ್ನೂ ನೇರವಾಗಿ ಭೇಟಿ ಮಾಡುತ್ತೇನೆ. ಬೆಳಗ್ಗೆ ವೇಳೆಯೇ ನೇರವಾಗಿ ಎಲ್ಲರ ಮುಂದೆ ಭೇಟಿ ಮಾಡ್ತಿನಿ. ಆದರೆ, ಸಿದ್ದರಾಮಯ್ಯನವರ ಥರ ಕದ್ದುಮುಚ್ಚಿ ಭೇಟಿ ಮಾಡಲ್ಲ ಎಂದು ಸಿದ್ದರಾಮಯ್ಯ ಕುರಿತು ಎಚ್ಡಿಕೆ ಹೊಸ ಬಾಂಬ್ ಸಿಡಿಸಿದರು.
ಬಿಜೆಪಿ ಜತೆ ಮೈತ್ರಿ ಇಟ್ಟಿಕೊಂಡಿದ್ದರೆ ಇವತ್ತು ನಾನೇ ಸಿಎಂ ಆಗಿರುತ್ತಿದ್ದೆ. ಕಾಂಗ್ರೆಸ್ ಸಹವಾಸ ಮಾಡಿ 12 ವರ್ಷ ಸಂಪಾದನೆ ಮಾಡಿದ್ದ ಗೌರವ ಹಾಳು ಮಾಡಿಕೊಂಡೆ. ದೇವೇಗೌಡರ ಮಾತು ಕಟ್ಟಿಕೊಂಡು ಕಾಂಗ್ರೆಸ್ ಜತೆ ಹೋದೆ. ಅವರ ಎಮೋಷನ್ಗೆ ಬೆಲೆ ಕೊಟ್ಟು ಕಾಂಗ್ರೆಸ್ ಜತೆ ಕೈ ಸೇರಿಸಿದೆ. ಆದ್ರೆ ಸಿದ್ದರಾಮಯ್ಯನವರ ಗುಂಪು ನನ್ನನ್ನು ಸರ್ವನಾಶ ಮಾಡಿಬಿಡ್ತು ಎಂದರು.
ಬಿಜೆಪಿಗೆ 105 ಸ್ಥಾನ ಗಿಫ್ಟ್ ಕೊಟ್ಟಿದ್ದೆ ಸಿದ್ದರಾಮಯ್ಯ. ಕಳೆದ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿಯ ಬಿ ಟೀಂ ಅಂತ ಪ್ರಚಾರ ಮಾಡಿದ್ರು. ಇದರಿಂದಲೇ ಬಿಜೆಪಿಗೆ 105 ಸೀಟು ಬಂತು. ಇಲ್ಲವಾಗಿದ್ದರೆ ಬಿಜೆಪಿ 70-80ಕ್ಕೆ ಬಿದ್ದುಹೋಗುತ್ತಿತ್ತು. ಸಿದ್ದರಾಮಯ್ಯ ಮಹಾನಭಾವರಿಂದಲೇ ಇಷ್ಟೆಲ್ಲ ಆಯ್ತು ಎಂದು ಕಿಡಿಕಾರಿದರು.
ನಮ್ಮ ಕುಟುಂಬಕ್ಕೆ ಒಂದು ಶಾಪ ಇದೆ
ಅಡಗೂರು ಎಚ್.ವಿಶ್ವನಾಥ್ ವಿರುದ್ಧ ಹರಿಹಾಯ್ದ ಎಚ್ಡಿಕೆ, ರಾಜಕೀಯದಲ್ಲಿ ಅನಾಥರಾದಾಗ ಮರುಜೀವ ಕೊಟ್ಟವರ ವಿರುದ್ಧ ಮಾತನಾಡುತ್ತಾರೆ. ದೇವೇಗೌಡರ ಫೋಟೋ ಇಟ್ಟುಕೊಳ್ಳುತ್ತೇನೆ ಅಂತಾರೆ. ಆದರೆ, ನನ್ನನ್ನು ಟೀಕೆ ಮಾಡುತ್ತಾರೆ. ನಾನು ಏನು ತಪ್ಪು ಮಾಡಿದ್ದೇನೆ? ನಮ್ಮ ಕುಟುಂಬಕ್ಕೆ ಒಂದು ಶಾಪ ಇದೆ. ನಾವು ಯಾರನ್ನು ಬೆಳೆಸುತ್ತೇವೆ ಅವರೇ ನಮ್ಮ ಬಗ್ಗೆ ಮಾತನಾಡುತ್ತಾರೆ. ಈ ಶಾಪ ವಿಮೋಚನೆ ಹೇಗೆ ಅಂತಾ ಕಂಡುಹಿಡಿಯಬೇಕು. ಇದರ ಬಗ್ಗೆ ಸಂಶೋಧನೆ ಮಾಡಬೇಕಾಗಿದೆ ಎಂದರು. (ದಿಗ್ವಿಜಯ ನ್ಯೂಸ್)