ಶಿರಸಿ: ಶ್ರದ್ಧೆಯಿಂದ ಗುರುಸೇವೆ ಮಾಡಿದರೆ ಜ್ಞಾನ ಪ್ರಾಪ್ತಿಯಾಗುತ್ತದೆ. ಈ ದಿಸೆಯಲ್ಲಿ ಪ್ರಾಚೀನ ಗುರುಕುಲ ಪದ್ಧತಿ ಬೆಳೆದು ಬಂದಿದೆ ಎಂದು ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ರಾಜರಾಜೇಶ್ವರಿ ವಿದ್ಯಾಸಂಸ್ಥೆ ಹಾಗೂ ಉಜ್ಜಯಿನಿಯ ಮಹರ್ಷಿ ಸಾಂದಿಪನೀ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನದ ಸಹಯೋಗದಲ್ಲಿ ತಾಲೂಕಿನ ಸ್ವರ್ಣವಲ್ಲಿಯಲ್ಲಿ ಗುರುವಾರ ರಾಜರಾಜೇಶ್ವರೀ ವೇದ ಗುರುಕುಲ ಉದ್ಘಾಟಿಸಿ ಅವರು ಆಶೀರ್ವದಿಸಿದರು. ಗುರುಕುಲವೆಂದರೆ ಗುರುಗಳು ಹಾಗೂ ವಿದ್ಯಾರ್ಥಿಗಳು ಒಂದೇ ಕಡೆ ಇರಬೇಕು. ವಿದ್ಯಾರ್ಥಿಗಳು ಗುರುಗಳ ಸೇವೆ ಮಾಡಿ ವಿದ್ಯಾರ್ಜನೆ ಮಾಡಬೇಕು ಎಂಬಿತ್ಯಾದಿ ಕೆಲವು ನಿಯಮಗಳಿಗೆ ಒಳಪಟ್ಟಿರುತ್ತದೆ. ಇದರಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಯುತ್ತದೆ. ಸಾಂಸಾರಿಕ ಹಾಗೂ ಹೊರಪ್ರಪಂಚದ ಸಮಸ್ಯೆಗಳು ಮನಸ್ಸಿನೊಳಗೆ ಸುಳಿಯುವುದಿಲ್ಲ. ಗುರುಸೇವೆಯಿಂದ ಅಹಂಕಾರ ನಾಶವಾಗಿ ವಿನಯಾದಿ ಸದ್ಗುಣ ಪರಂಪರೆಗಳು ವೃದ್ಧಿಯಾಗುತ್ತವೆ. ಒಟ್ಟಿನಲ್ಲಿ ಸಂಸ್ಕಾರ ಹಾಗೂ ವಿದ್ಯೆ ಎರಡೂ ಬೆಳೆಯುತ್ತದೆ ಎಂದರು.
ಮಹರ್ಷಿ ಸಾಂದಿಪನೀ ವೇದವಿದ್ಯಾ ಪ್ರತಿಷ್ಠಾನದ ಸಚಿವ ಪೊ›. ವಿರೂಪಾಕ್ಷ ಜಡ್ಡಿಪಾಲ್ ಮಾತನಾಡಿ, ವೇದಗಳು ಜ್ಞಾನದ ಖನಿ. ಅವುಗಳನ್ನು ಉಳಿಸಿ, ಬೆಳೆಸಿ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ಮಹರ್ಷಿ ಸಾಂದಿಪನೀ ವೇದವಿದ್ಯಾ ಪ್ರತಿಷ್ಠಾನ ಸ್ಥಾಪಿಸಲ್ಪಟ್ಟಿದೆ. ಇದರ ಪ್ರಯೋಜನವನ್ನು ಸುತ್ತಲಿನ ವಿದ್ಯಾರ್ಥಿಗಳು ಪಡೆದುಕೊಂಡಾಗ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದರು.
ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪೊ›.ಕಾ.ಈ. ದೇವನಾಥನ್ ಮಾತನಾಡಿ, ಹಿಂದೆ ಗ್ರಾಮ ಗ್ರಾಮಗಳಲ್ಲಿ ವೇದ ವಿದ್ಯಾದಾನ ನಡೆಯುತ್ತಿತ್ತು. ಇತ್ತೀಚೆಗೆ ಕೊಂಚ ಕ್ಷಿಣಿಸಿದೆ. ಅದನ್ನು ತುಂಬಲು ಈ ಗುರುಕುಲ ಪೂರಕವಾಗಲಿ. ಸ್ವರ್ಣವಲ್ಲೀ ಶ್ರೀಗಳು ವೇದ-ಶಾಸ್ತ್ರಗಳ ರಕ್ಷಣೆಗೆ ಕಾರ್ಯೋನ್ಮುಖರಾಗಿದ್ದಾರೆ. ಅವರ ಅನುಗ್ರಹ-ಮಾರ್ಗದರ್ಶನದಲ್ಲಿ ನಾವೆಲ್ಲ ಮುನ್ನಡೆಯೋಣ ಎಂದು ಆಶಯ ವ್ಯಕ್ತಪಡಿಸಿದರು.
ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ರಾಮಚಂದ್ರ ಭಟ್ಟ ಕೋಟೆಮನೆ ಮಾತನಾಡಿ, ಗುರಕುಲದಲ್ಲಿ ವೇದ, ಉಪನಿಷತ್ ವಿಜ್ಞಾನ, ಯೋಗ ಮೊದಲಾದ ವಿಷಯ-ವಿಚಾರಗಳ ಅಳವಡಿಕೆಯಾಗಬೇಕು. ಶಾಸ್ತ್ರಗಳ ಅಧ್ಯಯನ ಮತ್ತು ಜೀವನಕ್ಕೆ ಅನುಕೂಲವಾಗುವಂತೆ ಅವುಗಳ ಅಳವಡಿಕೆ, ಚಿಂತನೆಗಳು ನಡೆಯಬೇಕು ಎಂದರು.
ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಎನ್.ಜಿ. ಹೆಗಡೆ ಭಟ್ರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಸ್ಥಾನ ವಿದ್ವಾನ ಭಾಲಚಂದ್ರ ಶಾಸ್ತ್ರೀ, ಆಡಳಿತ ಮಂಡಳಿಯ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ಉಪಸ್ಥಿತರಿದ್ದರು. ಡಾ. ಮಹಾಬಲೇಶ್ವರ ಭಟ್ಟ ಕಿರಕುಂಭತ್ತಿ ಸ್ವಾಗತಿಸಿದರು. ಉದಯ ವೈದ್ಯ ವಂದಿಸಿದರು. ನಾರಾಯಣ ಭಟ್ಟ ಬೆಣ್ಣೆಗದ್ದೆ ನಿರ್ವಹಿಸಿದರು.