ಬೈಲಹೊಂಗಲ: ಪಟ್ಟಣದ ಕಲ್ಪವೃಕ್ಷ ಮಾದರಿ ಶಾಲೆಯಲ್ಲಿ ಶನಿವಾರ ಮಾರುಕಟ್ಟೆ ದಿನ ಕಾರ್ಯಕ್ರಮ ನೆರವೇರಿತು.
ಸಂಸ್ಥೆಯ ಅಧ್ಯಕ್ಷೆ ಮಂಗಳಾ ಢಮ್ಮಣಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ನೀಡುವುದರಲ್ಲಿ ಮಾರುಕಟ್ಟೆ ಯಶಸ್ವಿಯಾಗಿದ್ದು, ಅವರ ಮುಂದಿನ ಭವಿಷ್ಯಕ್ಕೆ ಪ್ರೇರಣೆಯಾಗಲಿದೆ ಎಂದರು.
ಪ್ರಾಚಾರ್ಯ ಹನಮೇಶ ದುಡ್ಯಾಳ ಮಾತನಾಡಿ, ಮಕ್ಕಳಿಗೆ ಚಿಕ್ಕಂದಿನಿಂದಲೇ ವ್ಯವಹಾರ ಜ್ಞಾನ ಅಗತ್ಯ ಎಂದರು.
ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ, ಶಾಲಾ ಸಂಯೋಜಕಿಯರು, ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ತಿಂಡಿ-ತಿನಿಸು, ಸ್ಟೇಶನರಿ ವಸ್ತುಗಳನ್ನು ಚಿಣ್ಣರು ಮಾರಿದರು.
ಮಕ್ಕಳ ತಾಯಂದಿರಿಗೆ ಪೌಷ್ಟಿಕಾಂಶ ಹೊಂದಿದ ಬೇಯಿಸದಿರುವ ತಿಂಡಿ-ತಿನಿಸು ತಯಾರಿಕೆ ಸ್ಪರ್ಧೆ ನಡೆಸಲಾಯಿತು. ದೀಪಾ ಜೋಶಿ, ಡಾ.ನಂದಾ ಮಹಾಂತಶೆಟ್ಟಿ, ಡಾ.ಶೈಲಜಾ ಮುದಕನಗೌಡರ, ಡಾ.ಗೀತಾ ಪುರಾಣಿಕಮಠ, ಸಂತೋಷ ಕೋಠಾರಿ, ಸುಖೇಶ ಶೆಟ್ಟಿ ಇತರರಿದ್ದರು.