ಗುರುಗುಂಟಾ: ಗ್ರಾಮದ ಕುಂಬಾರ ಓಣಿಯಲ್ಲಿ 250 ಕೆ.ವಿ. ಸಾಮರ್ಥ್ಯದ ವಿದ್ಯುತ್ ಪರಿವರ್ತಕದಲ್ಲಿ ನಿಯಮಿತವಾಗಿ ತಾಂತ್ರಿಕ ತೊಂದರೆ ಕಾಣಿಸಿಕೊಳ್ಳುತ್ತಿದ್ದು, ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.
ಇದನ್ನೂ ಓದಿರಿ: ವಿದ್ಯುತ್ ಪರಿವರ್ತಕಗಳನ್ನು ಬದಲಿಸಲು ಆಗ್ರಹ
ಈ ವಿದ್ಯುತ್ ಪರಿವರ್ತಕ ಅಳವಡಿಸಿ ಬಹಳ ವರ್ಷಗಳಾಗಿವೆ. ಸಾಮರ್ಥ್ಯಕ್ಕೂ ಮೀರಿದ ವಿದ್ಯುತ್ ಸಂಪರ್ಕಗಳು ಮತ್ತು ನಿರ್ವಹಣೆ ಇಲ್ಲದಿರುವುದರಿಂದ ದೋಷಕ್ಕೊಳಗಾಗುತ್ತಿರುವ ಪರಿವರ್ತಕ ಬದಲಾಯಿಸುವಂತೆ
ಗ್ರಾಹಕರು ಅನೇಕ ಬಾರಿ ಜೆಸ್ಕಾಂಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ ಎಂಬುದು ಗ್ರಾಹಕರ ಆರೋಪವಾಗಿದೆ.
ವೋಲ್ಟೇಜ್ ಹೆಚ್ಚು ಕಡಿಮೆ ಆಗಿ ಗೃಹೋಪಯೋಗಿ ವಸ್ತುಗಳು ಸುಟ್ಟಿವೆ. ರಾತ್ರಿ ವೇಳೆ ಕರೆಂಟ್ ಇಲ್ಲದಾಗ ಸೊಳ್ಳೆಗಳ ಹಾವಳಿಯಿಂದ ಜನರು ನಿದ್ದೆ ಮಾಡದ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೂ ಹಿನ್ನಡೆಯಾಗುತ್ತಿದೆ. ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ.
ಅನಿಯಮಿತ ವಿದ್ಯುತ್ ಕಡಿತ ಒಂದು ಕಡೆಯಾದರೆ ಪರಿವರ್ತಕದಲ್ಲಿನ ದೋಷದಿಂದ ಸಮಸ್ಯೆ ಹೆಚ್ಚಿದೆ. ವಿದ್ಯುತ್ ಪರಿವರ್ತಕ ಕೆಟ್ಟರೆ ಯಾವಾಗ ದುರಸ್ತಿ ಮಾಡಿಸುತ್ತಾರೆ ಎಂಬ ಖಾತ್ರಿಯಿಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.
| ತಿಪ್ಪಣ್ಣ ಮೇದಿನಾಪುರ ಸ್ಥಳೀಯ ನಿವಾಸಿ, ಗುರುಗುಂಟಾ
ನಿರಂತರವಾಗಿ ತೊಂದರೆಗೊಳಗಾಗುತ್ತಿರುವ ವಿದ್ಯುತ್ ಪರಿವರ್ತಕದ ಬಗ್ಗೆ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಪರಿವರ್ತಕಕ್ಕೆ ಸಕಾಲಕ್ಕೆ ಸುಮಾರು 30 ಲೀಟರ್ ಆಯಿಲ್ ಹಾಕಿದ್ದರೆ ಸುಡುತ್ತಿರಲಿಲ್ಲ. ಗ್ರಾಹಕರಿಗೆ ತೊಂದರೆಯಾಗದಂತೆ ಶೀಘ್ರ ಪರಿವರ್ತಕ ಅಳವಡಿಸಲಾಗುವುದು.
| ಚನ್ನಬಸವ ಜೆಸ್ಕಾಂ ಸೆಕ್ಷನ್ ಆಫೀಸರ್, ಗುರುಗುಂಟಾ