ಅಹಮದಾಬಾದ್ (ಗುಜರಾತ್): ಕರೊನಾ ಸೋಂಕಿತರೊಬ್ಬರು ಮೃತದೇಹವು ಅಹಮದಾಬಾದ್ನ ದಾನಿಲಿಮ್ದಾ ಏರಿಯಾದ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದಕ್ಕೆಲ್ಲಾ ಕಾರಣ ಆಸ್ಪತ್ರೆಯ ಸಿಬ್ಬಂದಿ ಮತ್ತು ಪೊಲೀಸರು ಎಂದು ಮೃತನ ಸಂಬಂಧಿಗಳು ಆರೋಪಿಸಿದ್ದಾರೆ.
ಮೃತದೇಹ ಬಸ್ ನಿಲ್ದಾಣದಲ್ಲಿ ಕಂಡುಬಂದಿದ್ದು ಹೇಗೆ ಎಂಬುದರ ತನಿಖೆಗೆ ಗುಜರಾತ್ ಸರ್ಕಾರ ಆದೇಶಿಸಿದ್ದು, ಸಿಎಂ ವಿಜಯ್ ರೂಪಾಣಿ ಅವರು ಮಾಜಿ ಪ್ರಧಾನ ಕಾರ್ಯದರ್ಶಿ (ಆರೋಗ್ಯ) ಜೆ.ಪಿ. ಗುಪ್ತಾ ಅವರಿಗೆ ತನಿಖೆಯ ಜವಾಬ್ದಾರಿ ವಹಿಸಿದ್ದು, 24 ಗಂಟೆಯೊಳಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.
ಇದನ್ನೂ ಓದಿ: ಸೌದೆ ತರಲು ಹೋಗಿದ್ದ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ವಿಡಿಯೋ ವೈರಲ್ ಮಾಡಿದ ಕಾಮುಕರು
ಛಾಗನ್ ಮಕ್ವಾನ (67) ಎಂಬಾತ ಅಹಮದಾಬದ್ ಜಿಲ್ಲೆಯ ಕೋವಿಡ್-19 ಆಸ್ಪತ್ರೆಗೆ ಕರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಮೇ 13ರಂದು ದಾಖಲಾಗಿದ್ದರು. ಅವರ ಕುಟುಂಬವನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು.
ಇದೀಗ ಮಕ್ವಾನ ಅವರ ಮೃತದೇಹ ಬಿಆರ್ಟಿಎಸ್ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಭದ್ರತಾ ಸಿಬ್ಬಂದಿ ಮೃತದೇಹ ಕಂಡು ಪೊಲೀಸರಿಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಮೃತದೇಹವನ್ನು ಪರೀಕ್ಷೆಗಾಗಿ ಪೊಲೀಸರು ಬೇರೋಂದು ಆಸ್ಪತ್ರೆಗೆ ಕೊಂಡೊಯ್ದಿದ್ದರು. ಮೃತನ ಪ್ಯಾಕೆಟ್ನಲ್ಲಿದ್ದ ನಂಬರ್ ಮೂಲಕ ಕುಟುಂಬದವರನ್ನು ಸಂಪರ್ಕಿಸಿದರು. ಆ ಬಳಿಕವೇ ಶವಪರೀಕ್ಷೆ ನಡೆಸಲಾಯಿತು ಎಂದು ಮಕ್ವಾನಾ ಸಹೋದರ ಗೋವಿಂದ ಅವರು ತಿಳಿಸಿದ್ದಾರೆ.
ಮಕ್ವಾನ ಸ್ಥಿತಿಯ ಬಗ್ಗೆ ಮಾಹಿತಿ ನೀಡಲು ಆಸ್ಪತ್ರೆ ಸಿಬ್ಬಂದಿ ವಿಫಲವಾದರು. ಪೊಲೀಸರು ಕೂಡ ವಿಚಾರಣೆ ನಡೆಸಲಿಲ್ಲ. ಎಸ್ಐಟಿ ತನಿಖೆಗೆ ನೀಡಲು ಪತ್ರ ಬರೆದಿದ್ದೇವೆ ಎಂದು ಬಿಜೆಪಿ ಶಾಸಕ ಗಿರೀಶ್ ಪಾರ್ಮರ್ ಸಹ ಆರೋಪಿಸಿದ್ದಾರೆ.
ಮಕ್ವಾನ್ ಅವರನ್ನು ಹೋಮ್ ಕ್ವಾರಂಟೈನ್ನಲ್ಲಿ ಇಡುವುದು ಸೂಕ್ತ ಎನಿಸಿತು. ಆತನಿಗೆ ಎಲ್ಲವನ್ನು ತಿಳಿಸಿ ಮನೆಗೆ ಹೋಗಲು ಹೇಳಿದ್ದೆವು. ಆದರೆ, ಆತನ ಜೀವನ ಹೇಗೆ ಕೊನೆಯಾಯಿತು ಎಂದು ನಮಗೆ ತಿಳಿದಿಲ್ಲ ಎಂದು ವೈದ್ಯರೊಬ್ಬ ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್)