ಕೊಪ್ಪಳ: ಸೇವಾ ಭಧ್ರತೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅತಿಥಿ ಉಪನ್ಯಾಸಕರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ರಾಜ್ಯದ ಸರ್ಕಾರಿ ಪದವಿ ಕಾಲೇಜಿನಲ್ಲಿ 14564 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದೇವೆ. ಕೆಲವರು 20 ವರ್ಷದಿಂದ ಸೇವೆ ಸಲ್ಲಿಸಿದರೂ ಸೇವಾ ಭದ್ರತೆ ಒದಗಿಸಿಲ್ಲ. ಯುಜಿಸಿ ಶಿಫಾರಸಿನಂತೆ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮಾಡಿಲ್ಲ. ಕರೊನಾ ಕಾರಣ ಲಾಕ್ಡೌನ್ ಆದಾಗಲೂ ಆನ್ಲೈನ್ ಕ್ಲಾಸ್ಗಳನ್ನು ನಡೆಸಿದ್ದೇವೆ. ಕರೊನಾದಿಂದ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದರೂ ಸರ್ಕಾರ ನೆರವಿಗೆ ಧಾವಿಸಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕುಟುಂಬ ನಿರ್ವಹಣೆ ಸಹ ಕಷ್ಟವಾಗಿದೆ. ಬಾಕಿ ವೇತನವನ್ನೂ ಸರ್ಕಾರ ನೀಡುತ್ತಿಲ್ಲವೆಂದು ದೂರಿದರು.
ಸರ್ಕಾರ ಶೀಘ್ರ ಬಾಕಿ ವೇತನ ಪಾವತಿಸಬೇಕು. ಸೇವಾ ಭದ್ರತೆ ಒದಗಿಸಬೇಕು. ಲಾಕ್ಡೌನ್ ಅವಧಿಯನ್ನು ಸೇವಾವಧಿಯೆಂದು ಪರಿಗಣಿಸಬೇಕು. ಯುಜಿಸಿ ನಿಯಮಾವಳಿಯಂತೆ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು. ಉಪನ್ಯಾಸಕರಾದ ಸಿದ್ದಲಿಂಗ ಬಾಗೇವಾಡಿ, ಎಂ.ಉಮಾದೇವಿ, ಶರಣು ಪಾಟೀಲ್, ಶರಣಪ್ಪ ಇತರರಿದ್ದರು.