ಬೆಂಗಳೂರು: ಕನ್ನಡ ಸೇರಿ ಎಲ್ಲ ಪ್ರಾದೇಶಿಕ ಭಾಷೆಗಳ ಪುಸ್ತಕ ಪ್ರಕಾಶಕರು ತಾವು ಪ್ರಕಟ ಮಾಡುವ ಪುಸ್ತಕಗಳ ಲೇಖಕರಿಗೆ ಕೊಡುವ ಸಂಭಾವನೆ ಮೇಲೆ ಸರ್ಕಾರ ವಿಧಿಸಿರುವ ಶೇ. 12ರಷ್ಟು ಜಿಎಸ್ಟಿಯನ್ನು ಹಿಂಪಡೆಯಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಒತ್ತಾಯಿಸಿದೆ.
ಪುಸ್ತಕ ಪ್ರಕಟಣೆ ಉದ್ಯಮ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಓದುಗರ ಕೊರತೆ, ಅಂತರ್ಜಾಲ, ಕಿಂಡಲ್, ಡಿಜಿಟಲ್ ಇತ್ಯಾದಿ ತಂತ್ರಜ್ಞಾನ ಆಧರಿತ ಆವೃತ್ತಿಗಳ ಪೈಪೋಟಿಯನ್ನು ಎದುರಿಸಲಾಗದೇ ಪ್ರಕಾಶಕರು ತೀವ್ರ ನಷ್ಟದಲ್ಲಿದ್ದಾರೆ.
ಇದನ್ನೂ ಓದಿ ಸಾಕ್ಷಿಗೆ ಇಷ್ಟವಿಲ್ಲದ ಧೋನಿ ಹೇರ್ಸ್ಟೈಲ್….!
ಗಾಯದ ಮೇಲೆ ಬರೆ ಹಾಕಿದಂತೆ ಕೇಂದ್ರ ಸರ್ಕಾರ ಲೇಖಕರ ಸಂಭಾವನೆ ಮೇಲೆ ಜಿಎಸ್ಟಿ ವಿಧಿಸಿದೆ. ಇದು ಸಮಂಜಸವಲ್ಲ. ಹೀಗಾಗಿ ಕೇಂದ್ರ ಸರ್ಕಾರ ವಿಧಿಸಿರುವ ಈ ತೆರಿಗೆಯನ್ನು ಕೈ ಬಿಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಗಾರ್ ಆಗ್ರಹಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.