ವಿಜಯವಾಣಿ ಸುದ್ದಿಜಾಲ ಗದಗ
ಜನರಿಗೆ ಉಚಿತ ಬೆಳಕು, ಸುಸ್ಥಿರ ಬದುಕು ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿ, ಸರ್ಕಾರ ನುಡಿದಂತೆ ನಡೆದಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಭಿಮಸೇನ ಜೋಶಿ ರಂಗಮಂದಿರದಲ್ಲಿ ಮಂಗಳವಾರ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಶೇ.90 ರಷ್ಟು ಜನರು ಯೋಜನೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಗದಗ ಶಹರದಲ್ಲಿ ಶೇ. 80, ಗದಗ ಗ್ರಾಮೀಣದಲ್ಲಿ ಶೇ. 91 ರಷ್ಟು ಜನರು ಈಗಿನಿಂದಲೇ ಈ ಯೋಜನೆ ಲಾಭ ಪಡೆಯಲಿದ್ದಾರೆ. ಸರ್ಕಾರ ಉಚಿತ ಬಸ್ ಸೇವೆ ಮೂಲಕ ಮಹಿಳೆಯರಿಗೆ ಅನುಕೂಲ ಆಗಿದೆ. ಈ ವರೆಗೆ ಜಿಲ್ಲೆಯಲ್ಲೇ ಕೋಟಿಗೂ ಅಧಿಕ ಮಹಿಳೆಯರು ಪ್ರವಾಸ ಮಾಡಿದ್ದಾರೆ ಎಂದರು.
ಅನ್ನಭಾಗ್ಯ ನಗದು ಯೋಜನೆ ಅಡಿ 10 ಕೋಟಿಗೂ ಅಧಿಕ ಹಣ ಜಿಲ್ಲೆಯ ಜನರ ಖಾತೆಗೆ ಸಂದಾಯವಾಗಿದೆ. ಗೃಹ ಲಕ್ಷಿ$್ಮ ಯೋಜನೆಯಡಿ ಶೇ. 90 ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದು, 15 ತಾರೀಖಿನ ನಂತರ ಪ್ರತಿ ಮಹಿಳೆಗೆ 2000 ರೂ. ಪಾವತಿಸಲಾಗುವುದು ಎಂದರು.
ಬಡತನ ನಿರ್ಮೂಲನೆಗೆ ಈ ಯೋಜನೆಗಳು ಸಹಕಾರಿ. ಪ್ರತಿಕುಟುಂಬಕ್ಕೂ ವಾಷಿರ್ಕ ಸರಾಸರಿ 60 ಸಾವಿರ ರೂ. ಸರ್ಕಾರ ನೀಡುತ್ತೀದೆ. ಎಲ್ಲ ವರ್ಗದ ಜನರಿಗೆ ಈ ಯೋಜನೆಯ ಲಾಭ ಆಗಲಿದೆ ಎಂದರು.
ಲಾಭದಲ್ಲಿ ಹೆಸ್ಕಾಂ:
ಉಚಿತ ವಿದ್ಯುತ್ ನೀಡುವುದರಿಂದ ವಿದ್ಯುತ್ ಸಂಸ್ಥೆಗಳಿಗೆ ನಷ್ಟವಾಗುತ್ತದೆ ಎಂಬ ಊಹೆ ಸುಳ್ಳಾಗಿದೆ. ಹೆಸ್ಕಾಂ ವಿಭಾಗದ 7 ಜಿಲ್ಲೆಗಳ 30 ಲಕ್ಷ ಮನೆಗಳಿಗೆ 1600 ಕೋಟಿ ರೂ. ವಿದ್ಯುತ್ ನೀಡಲಾಗುತ್ತಿದೆ. ಹೆಸ್ಕಾಂ ನಲ್ಲಿ ಈ ಮೊದಲು ಈ ವೈಜ್ಞಾನಿಕ ವಿದ್ಯುತ್ ಖರೀದಿಯಿಂದ 3 ಸಾವಿರ ಕೋಟಿ ರೂ. ನಷ್ಟ ಆಗುವುದನ್ನು ಈ ಕೊನೆ ಗಾಣಿಸಲಾಗಿದೆ. ಹೆಸ್ಕಾಂ ಎಂ.ಡಿ. ಮೊಹಮ್ಮದ್ ರೋಷನ್ ಅವರ ಚಾಕಚಕ್ಯತೆಯಿಂದ ಹೆಸ್ಕಾಂ ಈ ಮೊದಲು ಅನುಭವಿಸುತ್ತಿದ್ದ ನಷ್ಟದಿಂದ ಹೊರಬಂದಿದೆ. ಅಧಿಕ ಬೆಲೆ ನೀಡಿ ಅವೈಜ್ಞಾನಿಕ ವಿದ್ಯುತ್ ಖರೀದಿ ತಪ್ಪಿಸಿ ವೈಜ್ಞಾನಿಕ ವಿದ್ಯುತ್ ಖರೀದಿಗೆ ಹೆಸ್ಕಾಂ ಮುಂದಾಗಿದ್ದು, ಗೃಹಜ್ಯೋತಿ ಯೋಜನೆಯಿಂದ ಹೆಸ್ಕಾಂಗೆ ನಷ್ಟವಿಲ್ಲ ಎಂದರು.
ಹೆಸ್ಕಾಂ ವಿಭಾಗದ ಅಧೀಕ್ಷಕ ಇಂಜಿನಿಯರ್ ಎಸ್.ಎಸ್. ಜಂಗಿನ ಮಾತನಾಡಿ, ಭಾಗ್ಯಜ್ಯೋತಿ ಹಾಗೂ ಕುಟಿರ ಜ್ಯೋತಿ ಯೋಜನೆಗಳನ್ನು ಗೃಹಜ್ಯೋತಿಯೊಳಗೆ ವಿಲೀನಗೊಳಿಸಿ ಮಾಸಿಕ 53 ಯುನಿಟ್ ವಿದ್ಯುತ್ ಹಾಗೂ ಅಮೃತ ಜ್ಯೋತಿ ಯೋಜನೆಯಡಿ 75 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದು ಹೇಳಿದರು.
ಹೆಸ್ಕಾಂ ಎಂ.ಡಿ ಮೊಹಮ್ಮದ್ ರೋಷನ್, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದೇವರಮಠ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ನಗರಸಭೆ ಸದಸ್ಯ ಕೃಷ್ಣಾ ಪರಾಪೂರ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಹೆಸ್ಕಾಂ ಗದಗ ವಿಭಾಗದ ಮುಖ್ಯ ಇಂಜಿನಿಯರ್ ರಮೇಶ ಬೆಂಡಿಗೇರಿ ಇತರರು ಇದ್ದರು.