ಅಂಕೋಲಾ: ಯಶಸ್ವಿ ಕೃಷಿಕರಾಗಬೇಕಾದರೆ ಸೋಲುಗಳನ್ನು ಕೂಡ ಅನುಭವಿಸಲು ಸಿದ್ಧರಿರಬೇಕು. ಒಂದು ಸಮಯದಲ್ಲಿ ಬೆಳೆ ನಷ್ಟವಾಗಿ ನಾನು ಕೂಡ ಆತ್ಮಹತ್ಯೆಗೆ ಮುಂದಾಗಿದ್ದೆ. ನಂತರ ನನ್ನ ಪತಿಯ ಸಹಕಾರದೊಂದಿಗೆ ಮತ್ತೆ ಪಿನಿಕ್ಸ್ ಪಕ್ಷಿಯಂತೆ ಬೆಳೆಯಲು ಸಾಧ್ಯವಾಯಿತು ಎಂದು ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಹೇಳಿದರು.
ಇಲ್ಲಿನ ಕರ್ನಾಟಕ ರಾಜ್ಯ ಕಾಲೇಜು ಶಿಕ್ಷಣ ಮಂಡಳಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೆಸ್ಮೆಂಟ್ ಸೆಲ್ ಮತ್ತು ಐಕ್ಯುಎಸಿ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಮೀಣ ಉದ್ಯಮಶೀಲತೆಯ ಅವಕಾಶಗಳು ಮತ್ತು ಸವಾಲುಗಳು ವಿಷಯದ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣದ ಉದ್ಘಾಟಿಸಿ ಅವರು ಮಾತನಾಡಿದರು.
ಆಯಾ ಪ್ರದೇಶಕ್ಕೆ ಮತ್ತು ಆಯಾ ಋತುಮಾನಗಳಿಗೆ ಅನುಗುಣವಾಗಿ ರೈತರು ವಿವಿಧ ಬೆಳೆಗಳನ್ನು ಬೆಳೆಯಬೇಕು. ಕೃಷಿ, ತೋಟಗಾರಿಕೆ, ಅರಣ್ಯಕ್ಕೆ ಸಂಬಂಧಿಸಿದಂತೆ ಬೆಳೆಗಳನ್ನು ಬೆಳೆದಾಗ ಅದು ನಮ್ಮ ಭವಿಷ್ಯದುದ್ದಕ್ಕೂ ಫಲ ನೀಡುತ್ತದೆ. ಅಂಕೋಲಾದಲ್ಲಿಯೂ ಸಾಕಷ್ಟು ಅವಕಾಶಗಳಿದ್ದು, ವಿದ್ಯಾರ್ಥಿಗಳು ತಮಗಿರುವ ಭೂಮಿಯಲ್ಲಿ ಯಾವ ರೀತಿ ಕೃಷಿ ಮಾಡಬಹುದು ಎನ್ನುವುದನ್ನು ಅಧ್ಯಯನ ಮಾಡಬೇಕು.
ಕೇವಲ ಗೆದ್ದ ರೈತರನ್ನು ಮಾತ್ರ ನೋಡದೆ ಅವರು ಎಷ್ಟು ಬಾರಿ ಸೋತಿದ್ದಾರೆ. ಹೇಗೆ ಚೇತರಿಸಿಕೊಂಡರು ಎಂಬುದರ ಬಗ್ಗೆಯೂ ತಿಳಿದುಕೊಂಡಾಗ ಯಶಸ್ವಿ ಕೃಷಿಕರಾಗಲು ಸಾಧ್ಯ. ಯಾವುದೇ ಉದ್ಯೋಗ ನಮ್ಮನ್ನು ಕೈಬಿಡಬಹುದು. ಆದರೆ, ಭೂಮಿ ಮಾತ್ರ ನಮ್ಮನ್ನು ಕೈಬಿಡುವುದಿಲ್ಲ. ಪರಿಶ್ರಮವಿದ್ದರೆ ಕೃಷಿಯಲ್ಲಿಯೂ ಗೆಲುವು ಕಾಣಲು ಸಾಧ್ಯ ಎಂದರು.
ಪ್ರಾಚಾರ್ಯೆ ಡಾ. ಶಾರದಾ ಭಟ್, ನಿವೃತ್ತ ಪ್ರಾಚಾರ್ಯ ಡಾ. ಎಸ್.ವಿ.ನಾಯಕ, ಡಾ. ಎನ್.ವಿ.ನಾಯಕ ಮಾತನಾಡಿದರು. ಐಕ್ಯುಎಸಿ ಸುಮೈಯ್ಯ ಸೈಯದ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಮಧುರಶ್ರೀ ಎ.ಎಸ್., ಪ್ರಾಧ್ಯಾಪಕರ ಪೀಟರ್ ಬಿರ್ಜಿ ಎಂ. ನಿರ್ವಹಿಸಿದರು.