ಕಡೂರು: ಕುರುಬಗೆರೆಯ ಕಟ್ಟೆಹೊಳೆಯಮ್ಮ ದೇವಾಲಯ ಸಮೀಪ ವೇದಾ ನದಿಗೆ ಅಡ್ಡಲಾಗಿ ಭದ್ರಾ ಯೋಜನೆಯಡಿ 2.35 ಕೋಟಿ ರೂ. ವೆಚ್ಚದಲ್ಲಿ ಚೆಕ್ಡ್ಯಾಂ ನಿರ್ವಣವಾಗಲಿದೆ ಎಂದು ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.
ಪಟ್ಟಣಗೆರೆ ಗ್ರಾಮದಲ್ಲಿ 7.35 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಚೆಕ್ಡ್ಯಾಂ ನಿರ್ವಣದಿಂದ ವೇದಾ ನದಿಯಲ್ಲಿ ನೀರು ಶೇಖರಣೆಯಾಗಿ ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಲ ವೃದ್ಧಿಯಾಗಲಿದೆ. ಪಟ್ಟಣಗೆರೆಯಿಂದ ಕೆ.ಎಂ.ರಸ್ತೆಗೆ ಸೇರುವ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಯಾಗಿದ್ದು, ಬಂಡಿಕೊಪ್ಪಲು ಗ್ರಾಮದವರೆಗೆ 2.78 ಕಿಮೀ ರಸ್ತೆ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.
ಪಟ್ಟಣಗೆರೆ ಆಂಜನೇಯ ಸ್ವಾಮಿ ದೇವಾಲಯದಿಂದ ಕಟ್ಟೆಹೊಳೆಯಮ್ಮ ದೇವಾಲಯದವರೆಗೆ, ಮರಡಿಹಳ್ಳಿ ಆಂಜನೇಯ ಸ್ವಾಮಿ ದೇಗುಲ ಎದುರಿನ ರಸ್ತೆಗಳಿಗೆ ಹೆಚ್ಚುವರಿ ಅನುದಾನದಲ್ಲಿ ಕಾಂಕ್ರಿಟೀಕರಣ ಮಾಡಲಾಗಿದೆ ಎಂದರು.</