ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ತರಿಕಲ್ಲು ಕಾಲನಿ ಗ್ರಾಮದಲ್ಲಿ 4-5 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರೈತರು ಬೆಳೆದ ಬೆಳೆಗಳು ಒಂದು ಕಡೆ ಕೊಚ್ಚಿ ಹೋದರೆ, ಮತ್ತೆ ಹಲವೆಡೆ ನೆಲಕಚ್ಚಿವೆ.
ಗ್ರಾಮದ ರೈತ ಚಂದ್ರೇಗೌಡ ಅವರು ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಬೇಸಾಯ ಮಾಡಿದ ತಂಬಾಕು ಬೆಳೆ ಮಳೆಯಿಂದ ಹಾಳಾಗಿದ್ದು, ಅಪಾರ ನಷ್ಟವಾಗಿದೆ. ಬೇಸಾಯ ಮಾಡಿದ ತಂಬಾಕು ಗಿಡಗಳು ಈಗಾಗಲೇ ಎಲೆ ಮುರಿಯುವ ಹಂತಕ್ಕೆ ಬಂದಿದ್ದು, ಉತ್ತಮ ಇಳುವರಿ ಬಂದಿತ್ತು. ಇದಕ್ಕಾಗಿ ಸುಮಾರು ಆರು ಲಕ್ಷ ರೂ. ಖರ್ಚು ಮಾಡಲಾಗಿದೆ. ಆದರೆ ಅತಿ ಮಳೆಯಾದ ಪರಿಣಾಮ ತಂಬಾಕು ಗಿಡ, ಎಲೆಗಳೆಲ್ಲ ನೆಲಕಚ್ಚಿ ಹಾಳಾಗಿ ಹೋಗಿವೆ. ಬೇಸಾಯಕ್ಕೆ ಮಾಡಿರುವ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಆವರಿಸಿದೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ರೈತ ಚಂದ್ರೇಗೌಡ ಅಳಲು ತೋಡಿಕೊಂಡಿದ್ದಾರೆ.