ಫಿರೋಜಾಬಾದ್: ಯೇ ದೋಸ್ತಿ ಹಮ್ ನಹೀ ಛೋಡೆಂಗೆ ಎಂಬ ಹಾಡು ಎಲ್ಲರೂ ಒಮ್ಮೆಯಾದರೂ ಕೇಳಿರಬಹುದು. ಆ ಸಾಲುಗಳಿಗೆ ಅನುಗುಣವಾಗಿ ಬದುಕುವವರ ಕಥೆ ಮುನ್ನೆಲೆಗೆ ಬರುವುದು ಬಹು ವಿರಳ. ಈ ಪ್ರಕರಣದಲ್ಲಿ ಕ್ಯಾನ್ಸರ್ ಪೀಡಿತ ಗೆಳೆಯನ ಸಾವಿನ ನೋವನ್ನು ತಡೆದುಕೊಳ್ಳಲಾಗದೇ ಈ ವ್ಯಕ್ತಿ ಚಿತೆಗೆ ಹಾರಿ ಪ್ರಾಣ ಕಳೆದುಕೊ0ಡಿದ್ದಾರೆ.
ಫೀರೋರಾಬಾದ್ನ ಯಮುನಾ ನದಿ ದಡದಲ್ಲಿ ತನ್ನ ಸ್ನೇಹಿತನ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಚಿತೆಗೆ ಹಾರಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಆಘಾತಕಾರಿ ಘಟನೆ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ನೇಹಿತ ಕ್ಯಾನ್ಸರ್ ರೋಗಿ
ನಾಗ್ಲಾ ಖಂಗರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಅಶೋಕ್ (42) ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದು, ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಸಿರ್ಸಗಂಜ್ ವೃತ್ತ ಅಧಿಕಾರಿ (ಸಿಒ) ಪ್ರವೀಣ್ ತಿವಾರಿ ತಿಳಿಸಿದ್ದಾರೆ.
ಅವರ ಅಂತ್ಯಕ್ರಿಯೆಯನ್ನು ಯಮುನಾ ತೀರದಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆಸಲಾಯಿತು. ಈ ಸಂದರ್ಭ ಅವರ ಸ್ನೇಹಿತ ಆನಂದ್ (40) ಅಲ್ಲಿದ್ದರು. ಜನರು ಸ್ಮಶಾನದಿಂದ ಹೊರಬರಲು ಪ್ರಾರಂಭಿಸಿದಾಗ, ಆನಂದ್ ಇದ್ದಕ್ಕಿದ್ದಂತೆ ಚಿತೆಗೆ ಹಾರಿದರು ಎಂದು ಸಿಒ ಹೇಳಿದರು.
ಅಲ್ಲಿ ನಿಂತಿದ್ದ ಜನರು ಆತನನ್ನು ಚಿತೆಯಿಂದ ಹೊರತೆಗೆದು ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಆಗ್ರಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು. ಆದರೆ, ಆನಂದ್ ಆಗ್ರಾಕ್ಕೆ ತೆರಳುವ ಮಾರ್ಗಮಧ್ಯೆ ಮೃತಪಟ್ಟರು. ಆನಂದ್ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್)