ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ | ಮಾರುಕಟ್ಟೆಗಳಲ್ಲಿ ಖರೀದಿ ಜೋರು
ಕೋಲಾರ: ಬರದ ನಡುವೆಯೂ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಜಿಲ್ಲೆಯ ಜನತೆ ಸಿದ್ಧತೆ ನಡೆಸಿದ್ದು, ಮಾರುಕಟ್ಟೆಯಲ್ಲಿ ಹಬ್ಬದ ಸಾಮಗ್ರಿಗಳ ಖರೀದಿ ಜೋರಾಗಿ ನಡೆಯುತ್ತಿದೆ.
ಹಬ್ಬಕ್ಕೆ ಇನ್ನೂ ಎರಡು ದಿನ ಬಾಕಿಯಿದ್ದು, ಆದರೂ ಬರದ ನಡುವೆಯೂ ಜನತೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ನಗರದ ದೊಡ್ಡಪೇಟೆ, ಹಳೇ ಬಸ್ ನಿಲ್ದಾಣ, ಬ್ರಾಹ್ಮಣರ ಬೀದಿ, ಎಂಜಿ ರಸ್ತೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಜೋರಾಗಿದೆ. ದಿನದಿಂದ ದಿನಕ್ಕೆ ದಿನಬಳಕೆ ವಸ್ತುಗಳು ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ದೀಪಾವಳಿ ಹಬ್ಬಕ್ಕಾಗಿ ಹೂವು, ಹಣ್ಣು, ಪಟಾಕಿ ಖರೀದಿಯಲ್ಲಿ ತೊಡಗಿರುವ ನಾಗರಿಕರು ಭರ್ಜರಿ ಆಚರಣೆಗೆ ಖರೀದಿ ಮಾಡುತ್ತಿರುವುದು ಕಂಡು ಬಂತು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೂವಿನ ಬೆಲೆ ಕೊಂಚ ದುಬಾರಿಯಾಗಿದೆ. ಮಾರು ಹೂವಿಗೆ ಕನಕಾಂಬರ, ಮಲ್ಲಿಗೆ, ಮಲ್ಲೆ ಸೇರಿದಂತೆ ವಿವಿಧ ಹೂವಿನ ಬೆಲೆಗಳು ದುಬಾರಿಯಾಗಿದೆ. ಸೇವಂತಿ ಒಂದು ಮಾರಿಗೆ 150ರಿಂದ 200 ರೂಪಾಯಿಗೆ ಮಾರಾಟವಾಗುತ್ತಿದೆ. ಗುಲಾಬಿ ಕೆ.ಜಿಗೆ 200, ಚೆಂಡು ಹೂವು 180 ರೂ.ಗೆ ಮಾರಾಟವಾಗುತ್ತಿದೆ. ಸೇವಂತಿಗೆ ಒಂದು ಕುಚ್ಚು 250ರಿಂದ 300ರೂ, ಚೆಂಡು ಹೂವು ಕುಚ್ಚು 200 ರಿಂದ 300ರೂ.ಗೆ ಹಾಗೂ ಒಂದು ಜತೆ ಬಾಳೆಕಂದಿಗೆ 50 ರಿಂದ 100 ರೂ. ಮಾವಿನ ಸೊಪ್ಪು ಕಟ್ಟಿಗೆ 10 ರೂ. ಇದ್ದರೂ ಜನಕೊಳ್ಳಲು ಮುಂದಾಗುತ್ತಿದ್ದಾರೆ. ಹೂವಿನ ಬೆಲೆ ದುಬಾರಿಯಾಗಿರುವಂತೆಯೇ ಹಣ್ಣುಗಳ ಬೆಲೆ ತೀವ್ರವಾಗಿತ್ತು. ಒಂದು ಕೆಜಿ ಸೇಬಿಗೆ 120 ರೂ., ಬಾಳೆಹಣ್ಣು 80ರಿಂದ 90 ರೂ., ಮೋಸಂಬಿ 80 ರಿಂದ 100 ರೂ., ದಾಳಿಂಬೆ ಒಂದು ಕೆಜಿಗೆ 150 ರೂ. ಹೀಗೆ ಈ ರೀತಿ ಎಲ್ಲ ಹಣ್ಣುಗಳ ಬೆಲೆಗಳು ದುಬಾರಿಯಾಗಿವೆ. ಸಾಮಾನ್ಯ ನಾಗರಿಕರು ಖರೀದಿ ಮಾಡಲಾರದಂತಹ ಸ್ಥಿತಿ ಬಂದೊದಗಿದೆ. ನೋಮುದಾರ, ಗಚ್ಚೆ ಮುಡಿ ಖರೀದಿಗೆ ಜನ ಮುಗಿಬಿದ್ದರು.
ಮಣ್ಣಿನ ದೀಪಗಳಿಗೆ ಬೇಡಿಕೆ
ದೀಪಾವಳಿ ಹಬ್ಬಕ್ಕಾಗಿ ಮಣ್ಣಿನಿಂದ ಮಾಡಿದ ವಿವಿಧ ರೀತಯ ಅಲಂಕಾರಿಕ ಮಣ್ಣಿನ ದೀಪಗಳನ್ನು ನಗರದ ಪ್ರಮುಖ ಜನಸಂದಣಿ ಪ್ರದೇಶಗಳಲ್ಲಿ ಮಾರಾಟಕ್ಕಿಡಲಾಗಿದೆ. ಮೀಡಿಯಂ ದೀಪಗಳು 10 ರೂಗೆ ನಾಲ್ಕರಂತೆ ಮಾರಾಟವಾಗುತ್ತಿವೆ. ಸಾರ್ವಜನಿಕರು ತಮಗೆ ಬೇಕಿರುವ ಆಕಾರದ ದೀಪಗಳನ್ನು ಖರೀದಿ ಮಾಡುತ್ತಿರುವುದು ಕಂಡುಬಂದಿತು.
ವಾಹನ ಸಂಚಾರ ಸ್ಥಗಿತ
ಎಂಜಿ ರಸ್ತೆ, ದೊಡ್ಡಪೇಟೆ, ಬ್ರಾಹ್ಮಣರ ಬೀದಿ, ಹಳೇ ಬಸ್ ನಿಲ್ದಾಣದಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ವಾಹನಗಳ ದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಕೆಲಸ ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಯಾವುದೇ ಅಹಿತಕರ ಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಈರುಳ್ಳಿ ಬೆಲೆ ಏರಿಕೆ ಬಿಸಿ
ದಿನಸಿ ಬೆಲೆಗಳು ದುಪ್ಪಟ್ಟಾಗಿದ್ದು, ಬೇರೆ ತರಕಾರಿಗಳಿಗೆ ಹೊರತುಪಡಿಸಿದರೆ ಈರುಳ್ಳಿ ಬೆಲೆ ಬಲು ದುಬಾರಿಯಾಗಿದೆ. ಬೆಲೆ ಎಷ್ಟೇ ಏರಿಕೆಯಾದರೂ ಹಬ್ಬದ ತಯಾರಿ ಏನು ಕಡಿಮೆಯಾಗಿಲ್ಲ. ವರ್ಷಕ್ಕೊಮ್ಮೆ ಬರುವ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲು ಗ್ರಾಹಕರು ಮಾರುಕಟ್ಟೆ ಸೇರಿದಂತೆ ಅಂಗಡಿ ಮುಂಗ್ಗಟ್ಟುಗಳಲ್ಲಿ ಹಬ್ಬಕ್ಕೆ ಬೇಕಿರುವ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.
ಪಟಾಕಿ ನಿಷೇಧಿಸಿ ಆದೇಶ
ಅತ್ತಿಬೆಲೆಯಲ್ಲಿ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯದಲ್ಲಿ ಪಟಾಕಿ ಬಳಕೆ ಮಾಡುವುದನ್ನು ಸರ್ಕಾರವು ನಿಷೇಧಿಸಿದ್ದು, ಹಸಿರು ಪಟಾಕಿಗಳನ್ನು ಮಾತ್ರ ಬಳಕೆ ಮಾಡಲು ಸುತ್ತೋಲೆ ಹೊರಡಿಸಿದೆ. ಇದರಿಂದಾಗಿ ದೀಪಾವಳಿ ಹಬ್ಬದಲ್ಲಿ ನಾಗರಿಕರು ಪಟಾಕಿಕೊಳ್ಳುವುದರಲ್ಲಿ ಕಡಿಮೆಯಾಗಿದ್ದು, ಪರಿಸರ ಸಂರಕ್ಷಣೆಗಾಗಿ ಪಟಾಕಿ ಸಿಡಿಸಲು ಹಿಂಜರಿಕೆ ಕಂಡುಬಂದಿದೆ.