ಬಳ್ಳಾರಿ: ನಗರ ಮೂಲ ಸೌಕರ್ಯಗಳಿಂದ ಬಳಲುತ್ತಿದ್ದು, ಸರ್ಕಾರ ಅನುದಾನ ಬಿಡುಗಡೆ ಮಾಡದೆ ನಿರ್ಲಕ್ಷಿಸಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಚ್ಛ ಭಾರತ ಯೋಜನೆಯಡಿ ಬೆಂಗಳೂರು ನಗರ ಅಭಿವೃದ್ಧಿಗೆ ಸರ್ಕಾರ 3,500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಅದರೆ ಬಳ್ಳಾರಿಗೆ ಮಾತ್ರ 15 ಕೋಟಿ ರೂ. ಕೊಟ್ಟಿದೆ. ಜಿಲ್ಲೆ ವಿಭಜನೆಯಾದರೂ ಎರಡು ಜಿಲ್ಲೆಗಳಿಗೆ ಬಜೆಟ್ನಲ್ಲಿ ಯಾವುದೇ ವಿಶೇಷ ಅನುದಾನ ನೀಡಿಲ್ಲ. ಇಲ್ಲಿನವರು ಇಬ್ಬರು ಮಂತ್ರಿಗಳಿದ್ದರೂ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿಯಿಂದ ಸ್ವಜನ ಪಕ್ಷಪಾತ ನಡೆಯುತ್ತಿದೆ. ಕೇಂದ್ರದ ಮಂತ್ರಿಗಳಿಗೆ ಈಶ್ವರಪ್ಪ ದೂರು ನೀಡಿದ್ದು, ಸಿಎಂ-ಸಚಿವರ ನಡುವೆ ಸರಿಯಿಲ್ಲ ಎನ್ನುವುದನ್ನು ತೋರಿಸುತ್ತದೆ. ಸಿದ್ದರಾಮಯ್ಯ ಆಡಳಿತವನ್ನು ಕಮಿಷನ್ ಸರ್ಕಾರ ಎಂದವರು ಇವತ್ತು ಏನು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಮೂಲಸೌಲಭ್ಯ ಕಲ್ಪಿಸಲು ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಕೂಡ ಜನರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ. ಸ್ಪರ್ಧೆ ಕೋರಿ ಹಲವಾರು ಅರ್ಜಿಗಳು ಬಂದಿದ್ದು, ಸದ್ಯದಲ್ಲೇ ಅರ್ಹರನ್ನು ಆಯ್ಕೆ ಮಾಡಲಾಗುವುದು. ನಾವು ಮಾಡಿದ ಅಭಿವೃದ್ಧಿ ಮುಂದಿಟ್ಟುಕೊಂಡು ಜನರಲ್ಲಿ ಮತ ಕೇಳಲಿದ್ದೇವೆ. ಚುನಾವಣೆಯಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಗೆದ್ದು, ಅಧಿಕಾರ ಹಿಡಿಯಲಿದೆ ಎಂದರು. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಹಮ್ಮದ್ ರಫಿಕ್, ಮುಖಂಡರಾದ ವಿವೇಕ್, ಆಂಜನೇಯಲು ಇತರರಿದ್ದರು