ಪುರಿ : ಭಗವಾನ್ ಶ್ರೀ ಜಗನ್ನಾಥನ 144ನೇ ವರ್ಷದ ರಥಯಾತ್ರೆಯು ಒಡಿಶಾದ ಪುರಿಯಲ್ಲಿ ಇಂದು ಆರಂಭವಾಗಿದೆ. ಕಳೆದ ವರ್ಷದಂತೆ ಈ ವರ್ಷವೂ, ಕರೊನಾ ಹಿನ್ನೆಲೆಯಲ್ಲಿ, ಭಕ್ತಾದಿಗಳಿಗೆ ವೀಕ್ಷಣೆ ಅಥವಾ ಭಾಗವಹಿಸುವ ಅವಕಾಶವಿಲ್ಲದೆ ರಥಯಾತ್ರೆ ನಡೆಯುತ್ತಿದೆ.
ಪುರಿಯ 12 ನೇ ಶತಮಾನದ ಶ್ರೀ ಜಗನ್ನಾಥ ದೇವಾಲಯದಿಂದ ಶ್ರೀ ಜಗನ್ನಾಥ ದೇವರು ತಮ್ಮ ಸೋದರರೊಂದಿಗೆ ಎರಡೂವರೆ ಕಿಲೋಮೀಟರ್ ದೂರದಲ್ಲಿರುವ ಗುಂಡೀಚಾ ದೇವಾಲಯದ ಅತ್ತೆಯ ಮನೆಗೆ ಹೋಗುವುದನ್ನು ಆಚರಿಸಲು ಈ ರಥಯಾತ್ರೆಯನ್ನು ನಡೆಸಲಾಗುತ್ತದೆ ಎನ್ನಲಾಗಿದೆ.
ದೇವರ ದರ್ಶನಕ್ಕಾಗಿ ಜನರು ರಸ್ತೆಯಲ್ಲಿ ಗುಂಪು ಸೇರುವುದನ್ನು ತಡೆಯಲು ರಥಯಾತ್ರೆಯ ಮಾರ್ಗದ 19 ಕಿಲೋಮೀಟರ್ನಷ್ಟು ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಶ್ರೀ ಜಗನ್ನಾಥ ದೇವಾಲದಿಂದ ಗುಂಡೀಚಾ ದೇವಾಲಯದವರೆಗಿನ 3 ಕಿಲೋಮೀಟರ್ ಮಾರ್ಗದಲ್ಲಿ ಯಾವುದೇ ಚಟುವಟಿಕೆಗಳು ನಡೆಯದಂತೆ ನಿರ್ಬಂಧ ವಿಧಿಸಲಾಗಿದೆ.
ರಥಯಾತ್ರೆಯ ಕಾರ್ಯದಲ್ಲಿ ತೊಡಗಿರುವ ಸುಮಾರು 2,800 ಪುರೋಹಿತರು ಮತ್ತು ಅಧಿಕಾರಿಗಳಿಗೆ ಎರಡೂ ಡೋಸ್ ಕರೊನಾ ಲಸಿಕೆ ನೀಡಲಾಗಿದೆ. ಕರೊನಾ ಪರೀಕ್ಷೆ ನಡೆಸಿ, ನೆಗೆಟೀವ್ ವರದಿ ಬಂದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ರಥಯಾತ್ರೆಯ ಮುನ್ನ ಇವರೆಲ್ಲರಿಗೂ ಪ್ರತ್ಯೇಕವಾಗಿ ಸರ್ಕಾರಿ ವಸತಿ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ. (ಏಜೆನ್ಸೀಸ್)