ಡಾ. ರಾಜ್ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್ಕುಮಾರ್ ಹಿರಿಪುತ್ರ ವಿನಯ್ ರಾಜ್ಕುಮಾರ್, ಲಾಕ್ಡೌನ್ ಹೊತ್ತಲ್ಲಿ ಪ್ರೇಕ್ಷಕರಿಗೆ ಸಿಹಿ ಸುದ್ದಿಯೊಂದನ್ನು ಹೊತ್ತು ಬಂದಿದ್ದಾರೆ. ಬಹುದಿನಗಳಿಂದ ಕುತೂಹಲವಾಗಿಯೇ ಉಳಿದ ಗ್ರಾಮಾಯಣ ಸಿನಿಮಾ ಬಗ್ಗೆ ಒಂದಷ್ಟು ಅಪ್ಡೇಟ್ ಮಾಹಿತಿ ನೀಡಲಿದ್ದಾರೆ. ಹೌದು, 2018ರಲ್ಲಿ ‘ಅನಂತು ವರ್ಸಸ್ ನುಸ್ರತ್’ ಸಿನಿಮಾದ ಬಳಿಕ ವಿನಯ್ ಮತ್ತೆ ತೆರೆಮೇಲೆ ಬಂದಿಲ್ಲ. ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದರಾದರೂ, ಆ ಸಿನಿಮಾಗಳಿಂದಲೂ ಯಾವುದೇ ಸುದ್ದಿ ಹೊರಬಿದ್ದಿರಲಿಲ್ಲ. ಇದೀಗ ಆ ಪೈಕಿ ‘ಗ್ರಾಮಾಯಣ‘ ಸಿನಿಮಾ ಟೀಸರ್ ಮೂಲಕ ಆಗಮಿಸಲು ಸಜ್ಜಾಗಿದೆ.
ಹೌದು, ದೇವನೂರು ಚಂದ್ರು ನಿರ್ದೇಶನದಲ್ಲಿ ಮೂಡಿಬಂದಿರುವ ‘ಗ್ರಾಮಾಯಣ’ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿಕೊಂಡು, ಬಿಡುಗಡೆಗೆ ಸಜ್ಜಾಗಿದೆ. ಲಾಕ್ಡೌನ್ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿಕೊಳ್ಳುತ್ತಿತ್ತು. ಅದರ ಬದಲಿಗೆ ಈಗ ಟೀಸರ್ ಮೂಲಕ ‘ಗ್ರಾಮ..’ ದರ್ಶನ ಮಾಡಿಸಲು ವಿನಯ್ ರಾಜ್ಕುಮಾರ್ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಮಹೇಶ್ ಬಾಬು ಆಯ್ತು; ಈಗ ಸಲ್ಮಾನ್ ಸರದಿ
‘ವಸಿ ಟೈಮಾದ್ರು ಟಾಪಾಗೆ ಬತ್ತೀವಿ, 7ನೇ ತಾರೀಖು ಟೀಸರ್ ಬುಡ್ತಿವಿ’ ಎಂಬ ಸಾಲುಗಳನ್ನು ಬಳಸಿ ಹೊಸ ಪೋಸ್ಟರ್ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿಕೊಂಡಿದ್ದು, ಟೀಸರ್ ಮೇಲೆ ಕುತೂಹಲ ನೆಟ್ಟಿದೆ. ವಿನಯ್ ರಾಜ್ಕುಮಾರ್ಗೆ ಜೋಡಿಯಾಗಿ ಅಮೃತಾ ಅಯ್ಯರ್ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ‘ಕವಲುದಾರಿ‘ ಸಿನಿಮಾ ಖ್ಯಾತಿಯ ಸಂಪತ್, ಅಪರ್ಣಾ, ಶ್ರೀನಿವಾಸ ಪ್ರಭು, ಮಂಜುನಾಥ್ ಹೆಗಡೆ ಮುಖ್ಯಭೂಮಿಕೆಯಲ್ಲಿದ್ದಾರೆ.
ರೊಮ್ಯಾಂಟಿಕ್ ಆ್ಯಕ್ಷನ್ ಶೈಲಿಯ ಈ ಚಿತ್ರಕ್ಕೆ ಎನ್ಎಲ್ಎನ್ ಮೂರ್ತಿ ಬಂಡವಾಳ ಹೂಡಿದ್ದು, ಎಲ್ಎಂಕೆ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಅಭಿಷೇಕ್ ಕಾಸರಗೋಡು ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತ ಈ ಚಿತ್ರಕ್ಕಿದೆ.
ಹೊಡೆದಾಟಕ್ಕಿಳಿದ್ರಾ ದಿಗಂತ್- ಐಂದ್ರಿತಾ! ಲಾಕ್ಡೌನ್ನಲ್ಲೇ ಜೀವರಕ್ಷಕ ಕಲೆಗಳತ್ತ ದೃಷ್ಟಿ