ಶಿವಮೊಗ್ಗ: ನಗರದ ಸರ್ಕಾರಿ ಶಾಲೆಗಳ ಎರಡು ಸಾವಿರ ಮಕ್ಕಳಿಗೆ ಉಚಿತವಾಗಿ ಟೈಫಾಯಿಡ್ ಲಸಿಕೆ ನೀಡುವ ಗುರಿ ಹೊಂದಿರುವುದಾಗಿ ಸರ್ಜಿ ಫೌಂಡೇಷನ್ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ್ ಸರ್ಜಿ ಹೇಳಿದರು.
ನಗರದ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಶನಿವಾರ ಸರ್ಜಿ ಫೌಂಡೇಷನ್, ರೌಂಡ್ ಟೇಬಲ್ ಇಂಡಿಯಾ ಶಿವಮೊಗ್ಗ, ಭಾರತ ಸೇವಾದಳ ಶಾಖೆ ಆಶ್ರಯದೊಂದಿಗೆ ಆಯೋಜಿಸಿದ್ದ ಹರ್ ಘರ್ ತಿರಂಗಾ ಅಭಿಯಾನ ಹಾಗೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿ, ಶಿವಮೊಗ್ಗದಾದ್ಯಂತ ಹಲವು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಹಲವೆಡೆ ನೆರೆ ಉಂಟಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಬರುವ ಸಾಧ್ಯತೆ ಹೆಚ್ಚಿದೆ. ಮುಂಜಾಗ್ರತಾ ಕ್ರಮವಾಗಿ ಹಾಗೂ ಸ್ವಾತಂತ್ರೃದ ಅಮೃತ ಮಹೋತ್ಸವ ಅಂಗವಾಗಿ ಈ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಇಂದು 100 ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ನಂತರ ಒಟ್ಟು 2000 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಸರ್ಜಿ ಫೌಂಡೇಷನ್ನಿಂದ ಕಳೆದ ಮೂರು ವರ್ಷಗಳ ಹಿಂದೆ ಪ್ರವಾಹ ಸ್ಥಿತಿ ಉಂಟಾದಾಗ ಹಲವು ಬಡಾವಣೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ 2 ಸಾವಿರ ಮಂದಿಗೆ ಲಸಿಕೆ ನೀಡಲಾಗಿತ್ತು. ಎಲ್ಲ ಕಾರ್ಯಕ್ರಮಗಳಿಗೂ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಿದೆ ಎಂದು ಹೇಳಿದರು.
ಸಾವಿರಕ್ಕೂ ಅಧಿಕ ಮಕ್ಕಳಿಂದ ಜಾಥಾ: ಸಾವಿರಕ್ಕೂ ಅಧಿಕ ಮಕ್ಕಳಿಂದ ನಗರದ ಪ್ರಮುಖ ಬೀದಿಗಳಲ್ಲಿ ಹರ್ ಘರ್ ತಿರಂಗಾ ಜಾಥಾ ನಡೆಯಿತು. ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎದುರು ವಿದ್ಯಾರ್ಥಿಗಳ ಮೇಲೆ ಸಿಬ್ಬಂದಿ ಪುಷ್ಪ ಸುರಿದು ಹುರಿದುಂಬಿಸಿದರು.
ಎಡಿಸಿ ನಾಗೇಂದ್ರ ಹೊನ್ನಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಮೇಯರ್ ಸುನೀತಾ ಅಣ್ಣಪ್ಪ, ಪಾಲಿಕೆ ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ್, ಸದಸ್ಯೆ ಮೀನಾಕ್ಷಿ ಗೋವಿಂದರಾಜು, ಬಿಇಒ ನಾಗರಾಜ್, ಶಾಲೆ ಮುಖ್ಯಶಿಕ್ಷಕ ಕೆ.ಎಂ.ಮೋಹನ್, ಸೇವಾದಳದ ಪ್ರಸನ್ನ ಭಾಗವಹಿಸಿದ್ದರು.