ತರೀಕೆರೆ: ಸರ್ಕಾರಿ ಶಾಲೆಗಳ ಉಳಿವು ಶಿಕ್ಷಕರ ಕಾರ್ಯವೈಖರಿ ಮೇಲೆ ನಿಂತಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಬರಗೇನಹಳ್ಳಿ ಸರ್ಕಾರಿ ಶಾಲೆಯಲ್ಲ್ಲಿ ಲೋಕೋಪಯೋಗಿ ಇಲಾಖೆಯ 13.5 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿರುವ ವಿವೇಕ ಕೊಠಡಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಕೊರತೆಯಿಂದ ಹಲವು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಹಂತ ತಲುಪಿದ್ದು, ಗುಣಮಟ್ಟದ ಶಿಕ್ಷಣದಿಂದ ಮಾತ್ರ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ಸಾಧ್ಯ. ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಶಾಲೆಗೆ ಅಗತ್ಯವಿರುವ ಸೌಲಭ್ಯವನ್ನು ಶಿಕ್ಷಣ ಇಲಾಖೆ ಮೂಲಕ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಿ.ಎಚ್.ಮಧು ಮಾತನಾಡಿ, ಶಾಲೆಯಲ್ಲಿ ಮೂಲ ಸೌಕರ್ಯ ಕೊರತೆಯಿಂದ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಕೂಡಲೇ ಗಮನಹರಿಸಿ ಮಕ್ಕಳು ಕುಳಿತುಕೊಳ್ಳಲು ಪೀಠೋಪಕರಣಗಳ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷೆ ಮೀನಾಕ್ಷಮ್ಮ, ಉಪಾಧ್ಯಕ್ಷೆ ಕಲಾವತಿ, ಶಿಕ್ಷಣ ಸಂಯೋಜಕ ವಸಂತ್ಕುಮಾರ್, ಶಾಲಾ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ಕೋಮಲಾ, ಮುಖ್ಯಶಿಕ್ಷಕ ಟಿ.ಎಸ್.ತಿಪ್ಪೇಶ್, ಸಹ ಶಿಕ್ಷಕರಾದ ಎಲ್.ಹರೀಶ್, ಎಂ.ಇ.ಶೇಖರಪ್ಪ, ಕೆ.ದೇವರಾಜ್, ಸತೀಶ್ಕುಮಾರ್, ಸುಷ್ಮಾ ಇತರರಿದ್ದರು.