ನವದೆಹಲಿ: ಭಾರತ ಮಹಿಳಾ ಕಬಡ್ಡಿ ತಂಡದ ಮಾಜಿ ನಾಯಕಿ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತೆ ತೇಜಸ್ವಿನಿ ಬಾಯಿ ಅವರಿಗೆ ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾಲಯ 2 ಲಕ್ಷ ರೂಪಾಯಿ ಸಹಾಯ ಧನ ಘೋಷಿಸಿದೆ. ತೇಜಸ್ವಿನಿ ಬಾಯಿ ಅವರ ಪತಿ ನವೀನ್ ಕೋವಿಡ್ನಿಂದ ಇತ್ತೀಚೆಗಷ್ಟೇ ನಿಧನರಾದರು. ಪಂಡಿತ್ ದೀನದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕ್ರೀಡಾಪಟುಗಳ ಹಿತರಕ್ಷಣಾ ನಿಧಿಯಿಂದ ಆರ್ಥಿಕ ಸಹಾಯ ಧನ ನೀಡಲಾಗುತ್ತಿದೆ. ತೇಜಸ್ವಿನಿ ಹಾಗೂ ಅವರ ಪತಿ ನವೀನ್ಗೆ ಮೇ 1 ರಂದು ಕೋವಿಡ್ ಕಾಣಿಸಿಕೊಂಡಿತ್ತು. ತೇಜಸ್ವಿನಿ ಚೇತರಿಕೆಯ ಹಾದಿ ಹಿಡಿದರೆ ಮೇ 11 ರಂದು ನವೀನ್ ಸಾವನ್ನಪ್ಪಿಸಿದರು.
ಇದನ್ನೂ ಓದಿ: ಭಾರತದಲ್ಲಿ ಟಿ20 ವಿಶ್ವಕಪ್ ನಡೆಸುವುದು ಕಷ್ಟಕರ ಎಂದ ಆಸೀಸ್ ಕ್ರಿಕೆಟಿಗ
ಕೇವಲ 30 ವರ್ಷದ ನವೀನ್, ಅವರ ತಂದೆ ಸಾವಿನಿಂದ ವಿಚಲಿತರಾಗಿದ್ದರು. ಜತೆಗೆ ಗಾಬರಿಗೆ ಒಳಗಾದ ನವೀನ್ ಒತ್ತಡ ತಾಳಲಾರದೆ ಸಾವನ್ನಪ್ಪಿದರು ಎಂದು ತೇಜಸ್ವಿನಿ ಹೇಳಿಕೆಯನ್ನು ಭಾರತೀಯ ಕ್ರೀಡಾಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ. ನಾನು ಈ ಮೊತ್ತವನ್ನು ನಿರೀಕ್ಷಿಸಿರಲಿಲ್ಲ. ಕ್ರೀಡಾ ಸಚಿವಾಲಯ, ಸಾಯ್, ಭಾರತೀಯ ಒಲಿಂಪಿಕ್ ಸಂಸ್ಥೆ ಒಟ್ಟಿಗೆ ಸೇರಿ ಈ ಸಹಾಯ ಧನ ನೀಡಿವೆ. ನನ್ನಂಥ ತೊಂದರೆಯಲ್ಲಿರುವ ಕ್ರೀಡಾಪಟುಗಳಿಗೆ ಇದರಿಂದ ಸಹಾಯವಾಗಲಿದೆ ಎಂದು ತೇಜಸ್ವಿನಿ ಹೇಳಿದ್ದಾರೆ.
ಇದನ್ನೂ ಓದಿ: ಕನ್ನಡಿಗ ಅನಿಲ್ ಕುಂಬ್ಳೆ ಸಾಧನೆಯ ವಿಡಿಯೋ ಪ್ರಕಟಿಸಿ ಹಾಲ್ ಆಫ್ ಫೇಮ್ ಸಂಭ್ರಮಿಸಿದ ಐಸಿಸಿ,
ತೇಜಸ್ವಿನಿ 2011ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. 2010 ಹಾಗೂ 2014ರ ಏಷ್ಯಾಡ್ನಲ್ಲಿ ಸ್ವರ್ಣ ಜಯಿಸಿದ ಭಾರತ ಮಹಿಳಾ ತಂಡದ ಸದಸ್ಯೆಯಾಗಿದ್ದರು. ಈ ಮೊತ್ತವನ್ನು ತಮ್ಮ 5 ತಿಂಗಳ ಮಗುವಿನ ಭವಿಷ್ಯದ ನಿಧಿಗೆ ಇಡುವುದಾಗಿ ತೇಜಸ್ವಿನಿ ಹೇಳಿದ್ದಾರೆ.