ನವದೆಹಲಿ: ಜೂನ್ 1ರ ನಂತರ ಲಾಕ್ಡಾನ್ ಮುಂದುವರಿದರೂ ಸೀಮಿತ ಸಂಗತಿಗಳಿಗೆ ಮಾತ್ರ ಅನ್ವಯಿಸಲಿದೆ. ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳಿಗೆ ಮುಕ್ತ ಅವಕಾಶ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಕರೊನಾ ವ್ಯಾಪಿಸುವುದನ್ನು ತಡೆಯಲು ದೇಶಾದ್ಯಂತ ವಿಧಿಸಲಾಗಿದ್ದ ಲಾಕ್ಡೌನ್ನಿಂದಾಗಿ ಆರ್ಥಿಕ ವ್ಯವಸ್ಥೆ ಭಾರಿ ಕುಸಿತ ಕಂಡಿದೆ. ಇದರ ಪುನಶ್ಚೇತನಕ್ಕಾಗಿ ಈಗಾಗಲೇ ಎರಡು ಹಂತದಲ್ಲಿ ವಿವಿಧ ನೆರವು ಹಾಗೂ ಉತ್ತೇಜನಾ ಕ್ರಮಗಳನ್ನು ಸರ್ಕಾರ ಘೋಷಿಸಿದೆ.
ಆದರೆ, ಬೇಡಿಕೆಯೇ ಇಲ್ಲದೇ ಆರ್ಥಿಕ ಚಟುವಟಿಕೆ ಪುನಾರಂಭವಾದರೆ, ಎಲ್ಲ ಪ್ರಯತ್ನಗಳು ನಿರರ್ಥಕವೆನಿಸಲಿವೆ. ಈ ಕಾರಣಕ್ಕಾಗಿ ಬೇಡಿಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಅಂದರೆ ಮೂರನೇ ಹಂತದ ಆರ್ಥಿಕ ಪುನಶ್ಚೇತನ ಪ್ಯಾಕೇಜ್ ಘೋಷಿಸಲಿದೆ.
ಇದನ್ನೂ ಓದಿ; ಕರೊನಾ ಸಂಕಷ್ಟದಲ್ಲೂ ಈ ಕಂಪನಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ…!
ಈ ಹಿಂದಿನ ಎರಡು ಪ್ಯಾಕೇಜ್ಗಳು ಆರ್ಥಿಕ ವ್ಯವಸ್ಥೆಗೆ ನಿರೀಕ್ಷಿತ ಪುನಶ್ಚೇತನ ನೀಡದಿರುವುದು ಕಂಡುಬಂದಿದೆ. ಇದಕ್ಕೆ ಲಾಕ್ಡೌನ್ ಜಾರಿಯಲ್ಲಿದ್ದದ್ದು ಕೂಡ ಕಾರಣವೆನ್ನಲಾಗಿದೆ. ಲಾಕ್ಡೌನ್ ತೆರವಾದ ಬಳಿಕ ಆರ್ಥಿಕ ಚಟುವಟಿಕೆ, ಉತ್ಪಾದನೆಗೆ ತಕ್ಕಂತೆ ಬೇಡಿಕೆಯನ್ನು ಸೃಜಿಸಬೇಕಾಗಿದೆ. ಇದಕ್ಕಾಗಿ ಸರ್ಕಾರ ಎಲ್ಲ ಅವಕಾಶ ಹಾಗೂ ಸಾಧ್ಯತೆಗಳನ್ನು ಮುಕ್ತವಾಗಿರಿಸಿಕೊಂಡಿದೆ.
ಮೂರನೇ ಹಂತದ ಆರ್ಥಿಕ ಪ್ಯಾಕೇಜ್ ಈ ಹಿಂದಿನ ಎರಡು ಪ್ಯಾಕೇಜ್ಗಳಲ್ಲಿ ಉಂಟಾಗಿರುವ ಕೊರತೆ ಹಾಗೂ ನ್ಯೂನ್ಯತೆಗಳನ್ನು ತುಂಬಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇದರ ಘೋಷಣೆ ಇನ್ನೊಂದು ತಿಂಗಳ ನಂತರ ನಡೆಯಲಿದೆ ಎನ್ನಲಾಗಿದೆ.
ಕೈಗಾರಿಕೆಗಳಿಗೆ ಸಾಲ ನೀಡಿ ಉತ್ಪಾದನೆಗೆ ಚಾಲನೆ ನೀಡಲಾಗಿದೆ. ವಿವಿಧ ಸೇವಾ ವಲಯಗಳು ಕಾರ್ಯಾರಂಭಿಸಿವೆ. ಆದರೆ, ಜನರ ಬಳಿ ದುಡ್ಡೇ ಇಲ್ಲದಂತಾಗಿ ಬೇಡಿಕೆಯೇ ಸೃಷ್ಟಿಯಾಗುತ್ತಿಲ್ಲ. ಹೀಗಾಗಿ ಜನರ ಕೈಗೆ ದುಡ್ಡು ಅಥವಾ ಆರ್ಥಿಕ ಪರಿಹಾರ ದೊರೆಯುವಂತಾಗಲು ಸರ್ಕಾರ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ; ನಾಲ್ವರ ಪ್ರಯಾಣಕ್ಕೆ ಇಡೀ ವಿಮಾನವನ್ನೇ ಬುಕ್ ಮಾಡಿದ…!
ಹಿಂದಿನ ಎರಡು ಪ್ಯಾಕೇಜ್ನಂತೆ ಮುಂದಿನ ಹಂತದಲ್ಲೂ ಜನಧನ್ ಖಾತೆಗಳಿಗೆ ಹಣ, ಶ್ರಮಿಕರು ಹಾಗೂ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ, ರೈತರಿಗೆ ಹೆಚ್ಚಿನ ಸಾಲ, ದುಡಿಯುವ ವರ್ಗಕ್ಕೆ ನೆರವು ಘೊಷಣೆಯಾಗುವ ಸಾಧ್ಯತೆಗಳಿವೆ. ಆದರೆ, ಇನ್ನೊಂದು ತಿಂಗಳಲ್ಲಿ ಆರ್ಥಿಕ ವ್ಯವಸ್ಥೆ ಯಾವ ಹಂತಕ್ಕೆ ತಲುಪಲಿದೆ ಎಂಬುದರ ಮೇಲೆ ಇದೆಲ್ಲ ಆಧರಿಸಲಿದೆ.
https://www.vijayavani.net/corona-effect-hundreds-of-pre-schools-for-sale-in-bangalore/