ಗುಡಿಬಂಡೆ : ಹಳೇ ನ್ಯಾಯಾಲಯ ಜಾಗದ ವಿಚಾರವಾಗಿ ತಾಲೂಕು ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಡುವೆ ವಾಗ್ವಾದ ಏರ್ಪಟ್ಟು ಗುರುವಾರ ರಸ್ತೆಯಲ್ಲೇ ಜಟಾಪಟಿಗಿಳಿದರು.
ತಾಲೂಕು ಕಚೇರಿ ಮುಂಭಾಗದಲ್ಲಿರುವ ಹಳೇ ನ್ಯಾಯಾಲಯದ ಎದುರು ಬೀದಿಬದಿ ವ್ಯಾಪಾರಿಗಳಿಗೆ 22 ಲಕ್ಷ ರೂ. ಮೌಲ್ಯದ 40 ಮೀಟರ್ ಜಾಗದಲ್ಲಿ ಶೆಲ್ಟೃರ್ ನಿರ್ಮಿಸಲು ಪಪಂ ಮುಂದಾಗಿದೆ. ಆದರೆ ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ವಿರೋಧ ವ್ಯಕ್ತಪಡಿಸಿದ್ದರಿಂದ, ಪಪಂ ಮುಖ್ಯಾಧಿಕಾರಿ ರಾಜಶೇಖರ್ ಹಾಗೂ ಇಒ ನಡುವೆ ಕೆಲ ಸಮಯ ವಾಗ್ವಾದ ಉಂಟಾಯಿತು. ನಂತರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಧ್ಯ ಪ್ರವೇಶಿಸಿ ವಿವಾದಕ್ಕೆ ಬ್ರೇಕ್ ಹಾಕಿದರು.
ನ್ಯಾಯಾಲಯದ ಇತಿಹಾಸ: 1995ರಲ್ಲಿ ಫೌಂಡೇಶನ್ ಸ್ಟೋನ್ಗೆ ಅಂದಿನ ಅವಿಭಜಿತ ಕೋಲಾರ ಜಿಲ್ಲೆಯ ಇಎಸ್ಕ್ಯೂ ಜಿಲ್ಲಾಧ್ಯಕ್ಷ ಗೋಪಾಲ್ರಾವ್ ಅಡಿಪಾಯ ಹಾಕಿದ್ದರು. ನಂತರ 1998ರಲ್ಲಿ ಗೌರವ ಮುಖ್ಯ ನ್ಯಾಯ ಮೂರ್ತಿ ಆರ್.ಪಿ.ಸೇಥಿ ಕಟ್ಟಡ ಉದ್ಘಾಟನೆ ಮಾಡಿದ್ದರು. ಈ ರೀತಿಯ ಐತಿಹಾಸಿಕ ಹಿನ್ನೆಲೆ ಹೊಂದಿರುವ ನ್ಯಾಯಾಲಯ ಕಟ್ಟಡ ಎರಡು ಇಲಾಖೆಗಳು ಜಿದ್ದಿಗೆ ಬಿದ್ದು ಅನಾಥವಾಗಿದೆೆೆ.
ತಾಪಂ ವಾದ: ಬ್ರಿಟಿಷರ ಕಾಲದಿಂದ ಜಾಗ ತಾಪಂಗೆ ಸೇರಿದೆ. ಇಲ್ಲಿ ನ್ಯಾಯಾಲಯ ಕಟ್ಟಡಕ್ಕೂ ಮುಂಚೆ, ಸರ್ಕಾರಿ ಐಬಿ ಪ್ರವಾಸಿ ತಂಗುದಾಣ, ನಂತರದ ದಿನಗಳಲ್ಲಿ ಬಾಡಿಗೆ ಆಧಾರದ ಮೆರೆಗೆ ನ್ಯಾಯಾಲಯ ಕಟ್ಟಡ ನಿರ್ಮಾಣ ಮಾಡಿ ತಾಪಂಗೆ ಬಾಡಿಗೆ ನೀಡುತ್ತಿದ್ದರು. ಆದರೆ ಇಂದು ಏಕಪಕ್ಷೀಯವಾಗಿ ಪಪಂ ಅನಧಿಕೃತವಾಗಿ ಜಾಗ ಒತ್ತುವರಿಗೆ ಮುಂದಾಗಿರುವುದು ತಪ್ಪು ಎಂದು ತಾಪಂ ಮಾಜಿ ಸದಸ್ಯ ಪಿ.ಮಂಜುನಾಥ್ ತಿಳಿಸಿದರು.
ಕಾಂಟ್ರಾಕ್ಟರ್ ಹಣ ಪೋಲು: ತಾಪಂ ಹಾಗೂ ಪಪಂ ಅಧಿಕಾರಿಗಳ ಸ್ಥಳ ನಮ್ಮದು ಎಂಬ ವಾಗ್ವಾದದಿಂದ ಈಗಾಗಲೇ 23 ಬಾರಿ ಸ್ಥಳ ಬದಲಾವಣೆ ಮಾಡಲಾಗಿದೆ. ಕಾಮಗಾರಿ ಆರಂಭವಾಗಿ ಇನ್ನೇನು 45 ದಿನಗಳಲ್ಲಿ ಮುಗಿಸಬೇಕು ಎನ್ನುವಷ್ಟರಲ್ಲಿ ಆರೋಪ ಪ್ರತ್ಯಾರೋಪಗಳಿಂದ ಕಾಮಗಾರಿ ಸ್ಥಗಿತವಾಗಿದ್ದು, ಇದಕ್ಕೆ ಖರ್ಚಾದ ಹಣ ನಮಗೆ ಯಾರು ನೀಡುತ್ತಾರೆ ಎಂದು ಕಾಂಟ್ರಾಕ್ಟರ್ ಅಳಲು ತೋಡಿಕೊಂಡರು.
ಪಟ್ಟಣದ ಮುಖ್ಯರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸೂರು ಕಲ್ಪಿಸಲು ಪಪಂ ಮುಂದಾಗಿದ್ದು, ಸರ್ಕಾರಿ ಪ್ರೌಢಶಾಲೆ ಪಕ್ಕದ ಜಾಗ ಪಪಂಗೆ ಹಾಗೂ ಮುಂದಿನ ಜಾಗ ತಾಪಂಗೆ ಸೇರಿದೆ ಎಂಬುದು ತಿಳಿದು ಬಂದಿದೆ. ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಎಸ್.ಎನ್.ಸುಬ್ಬಾರೆಡ್ಡಿ, ಶಾಸಕರು ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರಪಟ್ಟಣದ ಬೀದಿಬದಿ ವ್ಯಾಪಾರಿಗಳಿಗೆ ಒಟ್ಟು 40 ಮೀಟರ್ ಜಾಗದಲ್ಲಿ ಶೆಲ್ಟೃರ್ ನಿರ್ಮಿಸಲು 22 ಲಕ್ಷ ರೂಪಾಯಿ ಮಂಜೂರಾಗಿದ್ದು, ಶಾಸಕರ ಸಮ್ಮುಖದಲ್ಲಿ ಜಾಗದ ಸಮಸ್ಯೆ ಬಗೆಹರಿಸಿ ಕಾಮಗಾರಿ ಆರಂಭಿಸಲಾಗುವುದು.
ರಾಜಶೇಖರ್, ಮುಖ್ಯಾಧಿಕಾರಿ ಪಪಂ ಗುಡಿಬಂಡೆ