ಚಿಕ್ಕಮಗಳೂರು: ಭೂಮಾಲೀಕರು ಸಾಗುವಳಿ ಮಾಡುತ್ತಿರುವ ಒತ್ತುವರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಅವರಿಗೇ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಎಚ್.ಟಿ.ಮೋಹನ್ ಕುಮಾರ್ ತಿಳಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ೪೦ ವರ್ಷದಿಂದ ಕಾಫಿಬೆಳೆಗಾರರು ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಾ ಬಂದಿದ್ದರು. ೨೦೦೫ರಿಂದ ಹಿಂದೆ ಯಾರೆಲ್ಲಾ ಸಾಗುವಳಿ ಮಾಡಿದ್ದರೋ ಅವರಿಗೆ ಆ ಭೂಮಿಯನ್ನು ಲೀಸ್ಗೆ ನೀಡಲು ಸರ್ಕಾರ ಆದೇಶ ಮಾಡಿ ಜಿಲ್ಲಾಧಿಕಾರಿಗೆ ಸುತ್ತೋಲೆ ಹೊರಡಿಸಿದೆ. ಇದರಿಂದ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯ ಎಲ್ಲ ವರ್ಗದ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಈ ಆದೇಶದ ಜಾರಿಗೆ ಕಾರಣರಾದ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಕಮಾರ್, ಕಂದಾಯ ಸಚಿವ ಕೃಷ್ಣಬೈರೇಗೌಡ, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಹಾಲಿ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಮೂರೂ ಜಿಲ್ಲೆಯ ಮಾಜಿ ಶಾಸಕರು, ಸಂಸದರ ಪ್ರಯತ್ನದಿಂದ ಗುತ್ತಿಗೆ ಆಧಾರದಲ್ಲಿ ಕಂದಾಯ ಭೂಮಿ ನೀಡಲು ಆದೇಶಿಸಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕಾಫಿಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳಾದ ಬಿ.ಎಸ್.ಜಯರಾಂ, ಮಹೇಶ್, ರತೀಶ್, ಮಲ್ಲೇಶಗೌಡ, ಸುರೇಶ್, ಶ್ರೀಧರ್, ಯತೀಶ್, ಎ.ಕೆ ವಸಂತೇಗೌಡ ಮತ್ತಿತರರಿದ್ದರು.