ಬೆಂಗಳೂರು: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಉಪನ್ಯಾಸಕರ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ಗೆ ಪತ್ರ ಬರೆದಿರುವ ಎಚ್ಡಿಕೆ, ಕರೊನಾ ಸೋಂಕು ಸಮುದಾಯಕ್ಕೆ ವ್ಯಾಪಿಸುವ ಭೀತಿಯಲ್ಲಿರುವಾಗ ಬೆದರಿಕೆಯ ಅಸ್ತ್ರ ಬಳಸುವ ಮೂಲಕ ಉಪನ್ಯಾಸಕರ ಜೀವದ ಜತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ ಕರೊನಾ ಕಲಿಸಿಕೊಟ್ಟಿರುವ ಪಾಠ ಏನು? ರವಿಚಂದ್ರನ್ ಹೇಳ್ತಾರೆ ಕೇಳಿ …
ಸೂಕ್ತ ವಸತಿ, ಸಾರಿಗೆ ಮತ್ತು ಹೋಟೆಲ್ ಸೌಲಭ್ಯ ಇಲ್ಲದಿರುವಾಗ ಹೊರ ಜಿಲ್ಲೆಗಳಿಗೆ ಹೋಗಿ ಉಪನ್ಯಾಸಕರು ಮೌಲ್ಯಮಾಪನ ಮಾಡುವುದು ಬಲು ಕಷ್ಟ. ಕನಿಷ್ಠ ಸೌಲಭ್ಯಗಳನ್ನು ಒದಗಿಸದೇ ಮೌಲ್ಯಮಾಪನಕ್ಕೆ ಒತ್ತಡ ಹೇರಲಾಗುತ್ತಿದೆ. ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಉಪನ್ಯಾಸಕರನ್ನು ನಿಯೋಜಿಸುವ ಮೊದಲು ವಿಕೇಂದ್ರೀಕರಣ ವ್ಯವಸ್ಥೆಯಾಗಬೇಕು. ಡಿಡಿಪಿಐಗಳು, ಜಿಲ್ಲಾಧಿಕಾರಿಗಳಿಂದ ಮೌಲ್ಯಮಾಪನಕ್ಕೆ ಬರದಿದ್ದರೆ ವೇತನರಹಿತ ರಜೆ ಎಂಬ ಧಮ್ಕಿ ಹಾಕಿಸುತ್ತಿರುವುದು ಅವಿವೇಕದ ಕ್ರಮ. ಪಿಯುಸಿ ಪರೀಕ್ಷೆ ಮುಗಿಯಲು ಜೂ.18 ರವರೆಗೆ ಕಾಲಾವಕಾಶವಿದೆ. ಸರ್ಕಾರ ‘ಗುಬ್ಬಿ’ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗಂಡಾಂತರ ಕಟ್ಟಿಟ್ಟ ಬುತ್ತಿ: ಪ್ರಸ್ತುತ ರಾಜ್ಯದಲ್ಲಿ ಕರೊನಾ ವೈರಸ್ನಿಂದ ಬಾಧಿತರಾದವರಿಗೆಲ್ಲ ರೋಗ ಲಕ್ಷಣಗಳು ಕಾಣಿಸಿಕೊಳ್ಳದೆಯೂ ಪಾಸಿಟವ್ ಪ್ರಕರಣಗಳು ಪತ್ತೆಯಾಗಿರುವ ನಿದರ್ಶನಗಳಿವೆ. ಪರಿಸ್ಥಿತಿ ಹೀಗಿರುವಾಗ ವ್ಯಕ್ತಿಯ ದೇಹದ ಉಷ್ಣತೆ, ಕೆಮ್ಮು- ನೆಗಡಿಗಳನ್ನಷ್ಟೇ ರೋಗದ ಲಕ್ಷಣಗಳೆಂದು ಭಾವಿಸಿದರೆ ಗಂಡಾಂತರ ನಿಶ್ಚಿತ ಬುತ್ತಿ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ ನಿಮ್ಮ ಮೊಬೈಲ್ನಲ್ಲಿ ಚೀನಾದ ಆ್ಯಪ್ ಇದೆಯೆ- ಪತ್ತೆ ಹಚ್ಚೋದು ಹೇಗೆ?
ಮೌಲ್ಯಮಾಪನ ಶಿಬಿರಗಳಲ್ಲಿ ಯಾರಾದರೂ ಒಬ್ಬರಲ್ಲಿ ಕರೊನಾ ಪಾಸಿಟಿವ್ ಬಂದರೆ ಶಿಬಿರದಲ್ಲಿ ಭಾಗವಹಿಸಿರುವ 500ರಿಂದ 800 ಮಂದಿ ಉಪನ್ಯಾಸಕರನ್ನು ಒಮ್ಮೆಲೇ ಹೇಗೆ ಕ್ವಾರಂಟೈನ್ ಮಾಡುತ್ತೀರಿ? ಒಮ್ಮೆ ಕ್ವಾರಂಟೈನ್ಗೆ ಒಳಗಾದರೆ 14 ದಿವಸಗಳ ಕಾಲ ಮೌಲ್ಯಮಾಪನ ಶಿಬಿರ ಸ್ಥಗಿತಗೊಳ್ಳಲೇಬೇಕು. ಆಗ ಫಲಿತಾಂಶ ಬಿಡುಗಡೆಗೆ ಹಿನ್ನೆಡೆಯಾಗುವುದಿಲ್ಲವೇ? ಇಂಗ್ಲಿಷ್ ಪತ್ರಿಕೆಯ ಪರೀಕ್ಷೆ ನಡೆಯದೆ ಫಲಿತಾಂಶ ಬಿಡುಗಡೆ ಸಾಧ್ಯವಿಲ್ಲದಿರುವಾಗ ಸಚಿವರಿಗೆ ಮೌಲ್ಯಮಾಪನ ನಡೆಸಲು ಯಾಕಿಷ್ಟು ಧಾವಂತ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.