ರಿಪ್ಪನ್ಪೇಟೆ: ರಾಜ್ಯ ಸರ್ಕಾರ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರಕಲು ಪ್ರಸ್ತುತ ಕಾಯ್ದೆ ಪೂರಕವಾಗಿದ್ದು, ರಾಜ್ಯ ಸರ್ಕಾರ ರೈತರ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಪ್ರಾಂಗಣದಲ್ಲಿ ಗುರುವಾರ ನಬಾರ್ಡ್ ಯೋಜನೆಯಲ್ಲಿ 2.5 ಕೋಟಿ ರೂ. ಅನುದಾನದಲ್ಲಿ ಮಂಜೂರಾಗಿರುವ ಬಾಕ್ಸ್ ಚರಂಡಿ, ಸಿಮೆಂಟ್ ರಸ್ತೆ ಹಾಗೂ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಕೃಷಿ ಕಾಯ್ದೆ ತಿದ್ದುಪಡಿ ಮಾಡಿ ರೈತರಿಗೆ ಮರಣ ಶಾಸನ ರೂಪಿಸಿತ್ತು. ಇದರ ಪರಿಣಾಮ ರಾಜ್ಯದಲ್ಲಿಯೂ ಕೃಷಿ ಉತ್ಪನ್ನ ಮಾರುಕಟ್ಟೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಅಪಾಯ ಎದುರಾಗಿತ್ತು. ನಂತರದ ದಿನಗಳಲ್ಲಿ ಕಾಯ್ದೆ ರದ್ದುಗೊಂಡಿದೆ. ಪರಿಣಾಮ ರಾಜ್ಯ ಸರ್ಕಾರ ಎಪಿಎಂಸಿಗಳನ್ನು ಸದೃಢಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಪಟ್ಟಣದ ಉಪ ಮಾರುಕಟ್ಟೆಯಲ್ಲೂ ದಿನನಿತ್ಯ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುಸಜ್ಜಿತ ರಸ್ತೆ ಹಾಗೂ ನೀರಿನ ಅಗತ್ಯತೆಗೆ ಓವರ್ಹೆಡ್ ಟ್ಯಾಂಕ್ ನಿರ್ಮಿಸುತ್ತಿದ್ದೇವೆ. ದಲ್ಲಾಳಿಗಳ ವ್ಯಾಪಾರವನ್ನು ತಪ್ಪಿಸಿ ರೈತರು ಎಪಿಎಂಸಿಗಳಲ್ಲಿಯೇ ವಹಿವಾಟು ನಡೆಸಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್, ಮುಖಂಡರಾದ ಬಂಡಿ ರಾಮಚಂದ್ರ, ಈಶ್ವರಪ್ಪಗೌಡ, ಎನ್.ಚಂದ್ರೇಶ, ಡಿ.ಇ. ಮಧುಸೂದನ, ಗಣಪತಿ, ಆಸೀಫ್, ಮಹಮ್ಮದ್ ಷರೀಫ್, ಚಂದ್ರಶೇಖರ, ಎಪಿಎಂಸಿ ಅಧಿಕಾರಿಗಳಾದ ರವಿ, ರಮೇಶ ಇತರರಿದ್ದರು.
ಕಳೆದ ಚುನಾವಣೆ ಸಂದರ್ಭ ಮಾಜಿ ಶಾಸಕರು ಎಲ್ಲೆಂದರಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಹೋಗಿದ್ದಾರೆ. ಆದರೆ ಯಾವ ಕಾಮಗಾರಿಗಳಿಗೂ ಅನುದಾನ ಮಂಜೂರು ಮಾಡಿಸಿಲ್ಲ. ಆದರೂ ನಾನೇ ಮಾಡಿಸಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ನಾನು ಶಾಸಕನಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಎಲ್ಲ ಕಾಮಗಾರಿಗಳಿಗೂ ಹಣ ಮಂಜೂರು ಮಾಡಿಸಿದ್ದೇನೆ. ಗ್ಯಾರಂಟಿ ಯೋಜನೆಗಳನ್ನು ಬಳಸಿಕೊಂಡು ರಾಜ್ಯದ ಅಭಿವೃದ್ಧಿಗೆ ಬೊಕ್ಕಸದಲ್ಲಿ ಅಗತ್ಯಕ್ಕೆ ತಕ್ಕಷ್ಟು ಅನುದಾನವಿದೆ.
ಗೋಪಾಲಕೃಷ್ಣ ಬೇಳೂರು, ಶಾಸಕ