ಗೊರೇಬಾಳ: ಗ್ರಾಮದ ಗುತ್ತೂರು ಆಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ಮಂಗಳಮುಖಿ ಜಮುನಾ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರನ್ನು ಗಮನಿಸಿ, ಜಮುನಾ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದರು. ಈ ಹಿಂದೆ ಹೊಸಳ್ಳಿ ಇ.ಜೆ ಕ್ಯಾಂಪ್ನ ದುರ್ಗಾದೇವಿ ದೇವಾಲಯದಲ್ಲಿ ಸಾಮೂಹಿಕ ಮದುವೆ ಮಾಡಿದ್ದನ್ನು ಭಕ್ತರು ನೆನಪಿಸಿಕೊಂಡರು.ಸಮಾಜ ಸೇವೆ ಗುರುತಿಸಿ ಜಮುನಾರನ್ನು ಚನ್ನಪ್ಪ ತಾತ, ಪಾಲಾಕ್ಷಯ್ಯ ತಾತ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಕೆ.ಬೀರಪ್ಪ ಸನ್ಮಾನಿಸಿದರು.
ಬಡವರ ಕಣ್ಣೀರು ಒರೆಸಲು ಕಿಂಚಿತ್ತಾದರೂ ಸೇವೆ ಮಾಡುವ ಉದ್ದೇಶ ಇದೆ. ಬಡವರ ಸೇವೆಯಿಂದ ಆತ್ಮತೃಪ್ತಿ ದೊರಕುತ್ತದೆ ಎನ್ನುವ ಸಮಾಧಾನ ನನ್ನಲ್ಲಿದೆ. ಮುಂದೆಯೂ ನಮ್ಮ ಕೈಲಾದ ಸೇವೆಯನ್ನು ಮುಂದುವರಿಸುವುದಾಗಿ ಜಮುನಾ ಹೇಳಿದರು. ಮ್ಯಾಗಡೆ ಶರಣಪ್ಪ, ಯಮನೂರಪ್ಪ ನಾಯಕ, ಎಂ.ಶರಣಪ್ಪ, ಸಿದ್ದಪ್ಪ, ರಮೇಶ ಇತರರು ಇದ್ದರು.