ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡದ ಮೊತ್ತ ಪಾವತಿಗೆ ಶೇ.50 ವಿನಾಯಿತಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮಂಗಳವಾರ ಒಂದೇ ದಿನ 3.14 ಲಕ್ಷ ಪ್ರಕರಣಗಳಿಂದ ಬರೋಬ್ಬರಿ 8.13 ಕೋಟಿ ರೂ. ದಂಡ ಸಂಗ್ರಹವಾಗಿದೆ.
ಈ ಮೂಲಕ ಕಳೆದ ಐದು ದಿನಗಳಲ್ಲಿ 14.71 ಲಕ್ಷ ಪ್ರಕರಣಗಳಿಂದ ಒಟ್ಟು 41.2 ಕೋಟಿ ರೂ. ದಂಡ ಸಂಗ್ರಹವಾಗಿದೆ. ಮಂಗಳವಾರ ಸಂಚಾರ ಪೊಲೀಸ್ ಠಾಣೆಗಳ ಮೂಲಕ 1.59 ಲಕ್ಷ ಪ್ರಕರಣಗಳಿಂದ 3.79 ಕೋಟಿ ರೂ., ಟಿಎಂಸಿ ಕೌಂಟರ್ನಲ್ಲಿ 336 ಪ್ರಕರಣಗಳಿಂದ 88 ಸಾವಿರ ರೂ., ಬೆಂಗಳೂರು ಒನ್ ವೆಬ್ಸೈಟ್ ಮೂಲಕ 58 ಸಾವಿರ ಪ್ರಕರಣಗಳಿಂದ 1.01 ಕೋಟಿ ರೂ. ಹಾಗೂ ಪೇಟಿಎಂ ಮುಖಾಂತರ 1.15 ಲಕ್ಷ ಪ್ರಕರಣಗಳಿಂದ 3.31 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ.
ಕೆಎಸ್ಪಿ ಆ್ಯಪ್ನಲ್ಲಿ ದಂಡ ಪಾವತಿಸಿ
ದಂಡ ಪಾವತಿಸುವವರ ಸಂಖ್ಯೆ ಹೆಚ್ಚಾಗಿರುವ ಬೆನ್ನಲ್ಲೇ ಕರ್ನಾಟಕ ರಾಜ್ಯ ಪೊಲೀಸ್ನ ಅಧಿಕೃತ ಆ್ಯಪ್ ‘ಕೆಎಸ್ಪಿ’ ಮುಖಾಂತರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪರಿಶೀಲಿಸಿ ಬಾಕಿ ದಂಡ ಮೊತ್ತ ಪಾವತಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಕೆಎಸ್ಪಿ ಆ್ಯಪ್ ಹೊಂದಿರುವ ಸಾರ್ವಜನಿಕರು ಆ್ಯಪ್ ಅಪ್ಡೇಟ್ ಅಥವಾ ರೀ ಇನ್ಸ್ಟಾಲ್ ಮಾಡಬೇಕು. ಈ ಆ್ಯಪ್ನಲ್ಲಿ ಟ್ರಾಫಿಕ್ ಫೈನ್ಸ್ ಆಪ್ಷನ್ ಇದ್ದು, ಅದರ ಮೇಲೆ ಕ್ಲಿಕ್ ಮಾಡಿದರೆ, ಪುಟ ತೆರೆದುಕೊಳ್ಳಲಿದೆ. ಅಲ್ಲಿ, ವಾಹನ ನೋಂದಣಿ ಸಂಖ್ಯೆ ಅಥವಾ ದಂಡದ ಚಲನ್ ಸಂಖ್ಯೆ ನಮೂದಿಸಿದರೆ, ಫೋಟೋ ಸಹಿತ ನಿಯಮ ಉಲ್ಲಂಘನೆ ಪ್ರಕರಣಗಳ ಮಾಹಿತಿ ತೆರೆದುಕೊಳ್ಳಲಿದೆ. ಬಳಿಕ ಆನ್ಲೈನ್ನಲ್ಲೇ ದಂಡ ಪಾವತಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿನಿಮಾ ಹೀರೋಯಿನ್ಗೆ ಹೋಲಿಸಿದ್ದಕ್ಕೆ ಪತಿಗೆ ಊಟ ಹಾಕಲ್ಲ ಎಂದ ಪತ್ನಿ!