ಮಂಗಳೂರು: ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಭಾಗದ ಕ್ರೈಸ್ತರು ತಮ್ಮ ಆರಾಧ್ಯ ಮೂರ್ತಿ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನವನ್ನು ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಶುಭ ಶುಕ್ರವಾರವನ್ನಾಗಿ ಆಚರಿಸಿದರು.
ಕ್ರೈಸ್ತರು ಉಪವಾಸ ವ್ರತ ಕೈಗೊಂಡು, ಚರ್ಚ್ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ, ಶಿಲುಬೆಯ ಹಾದಿ (ವೇ ಆ್ ದಿ ಕ್ರಾಸ್), ಧ್ಯಾನ, ಶಿಲುಬೆಯ ಆರಾಧನೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಮಂಗಳೂರಿನ ಮಿಲಾಗ್ರಿಸ್ ಚರ್ಚ್ನಲ್ಲಿ ಕ್ರೈಸ್ತ ಬಾಂಧವರು ವಿಶೇಷ ಪ್ರಾರ್ಥನೆ, ಶಿಲುಬೆಯ ಹಾದಿ ಕಾರ್ಯಕ್ರಮಗಳಲ್ಲಿ ಬೆಳಗ್ಗೆಯಿಂದ ಪಾಲ್ಗೊಂಡರು. ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಮೊದಲ್ಗೊಂಡು ಅವರು ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿ ವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ ’ಶಿಲುಬೆಯ ಹಾದಿ’ (ವೇ ಆಫ್ ದಿ ಕ್ರಾಸ್) ದಿನದ ಪ್ರಮುಖ ಕಾರ್ಯಕ್ರಮವಾಗಿತ್ತು. ಮಂಗಳೂರಿನ ಮಿಲಾಗ್ರಿಸ್ ಚರ್ಚ್ನಲ್ಲಿ ಬೆಳಗ್ಗೆ ನಡೆದ ಶಿಲುಬೆಯ ಹಾದಿ ಕಾರ್ಯಕ್ರಮದಲ್ಲಿ ನೂರಾರು ಕ್ರೈಸ್ತರು ಭಾಗವಹಿಸಿದರು.
ಮಿಲಾಗ್ರಿಸ್ ಚರ್ಚ್ ಪ್ರಧಾನ ಗುರು ಫಾದರ್ ಬೊನವೆಂಚರ್ ನಜರೆತ್ ನೇತೃತ್ವ ವಹಿಸಿದ್ದರು.
ದೇರಳ ಕಟ್ಟೆ ಸಮೀಪದ ಪಾನೀರ್ ಅವರ್ ಲೇಡಿ ಆಫ್ ಮರ್ಸಿ ಚರ್ಚ್ ನಲ್ಲಿ ಶಿಲುಬೆಯ ಹಾದಿ (ವೇ ಆಫ್ ದಿ ಕ್ರಾಸ್) ಕಾರ್ಯಕ್ರಮ ನಡೆಯಿತು. ಧರ್ಮಗುರು ರೆ.ಫಾ. ವಿಕ್ಟರ್ ಡಿಮೆಲ್ಲೊ ನೇತೃತ್ವ ಮತ್ತು ಡೀಕನ್ ಪ್ರದೀಪ್ ರೊಡ್ರಿಗಸ್ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚರ್ಚಿನ ಕ್ರೈಸ್ತರು, ಧರ್ಮ ಭಗಿನಿಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.