More

    40 ಸಾವಿರ ರೂ. ವಂಚಿಸಿ 15 ವರ್ಷ ತಲೆಮರೆಸಿಕೊಂಡಿದ್ದವ 2 ಚಿನ್ನದ ಹಲ್ಲುಗಳಿಂದಾಗಿ ಸಿಕ್ಕಿಬಿದ್ದ!

    ಮುಂಬೈ: ಎಂಥದ್ದೇ ಕಳ್ಳನಾದರೂ ಒಂದು ಸುಳಿವು ಬಿಟ್ಟು ಹೋಗಿರುತ್ತಾನೆ ಎಂಬ ಮಾತಿದೆ. ಅದಕ್ಕೆ ಹತ್ತಿರವೆನಿಸುವ ಸಂಗತಿಯೊಂದು ನಡೆದಿದೆ. ಇಲ್ಲೊಬ್ಬ ವಂಚಕ 40 ಸಾವಿರ ರೂ. ವಂಚನೆ ಮಾಡಿ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದರೂ ತನ್ನ ಎರಡು ಚಿನ್ನದ ಹಲ್ಲುಗಳಿಂದಾಗಿ ಸಿಕ್ಕಿಹಾಕಿಕೊಂಡಿದ್ದಾನೆ.

    ಪ್ರವೀಣ್ ಅಶುಭಾ ಜಡೇಜಾ ಎಂಬ 38 ವರ್ಷದ ವ್ಯಕ್ತಿ ಬಂಧಿತ ವಂಚಕ. ಈತ 2007ರಲ್ಲಿ 40 ಸಾವಿರ ರೂ. ವಂಚಿಸಿ ಪರಾರಿಯಾಗಿದ್ದ. ಮುಂಬೈನ ಪರೆಲ್​ನ ಸೇವ್ರಿ ಎಂಬಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್​ಮ್ಯಾನ್​ ಆಗಿದ್ದ ಜಡೇಜಾ, 2007ರ ಜುಲೈ 28ರಂದು ತನ್ನ ಮಾಲೀಕರಿಗೆ ವಂಚಿಸಿದ್ದ. ಅಂದರೆ ಅಂಗಡಿಯ ನಂಬಿಕಸ್ಥ ಕೆಲಸಗಾರನೊಬ್ಬ ಗೈರಾಗಿದ್ದರಿಂದ ಆ ದಿನ ಗ್ರಾಹಕರೊಬ್ಬರಿಂದ ಬರಬೇಕಿದ್ದ 40,000 ರೂ. ಸಂಗ್ರಹಿಸಿಕೊಂಡು ಬರಲು ಮಾಲೀಕರು ಪ್ರವೀಣ್​​ನನ್ನು ಕಳಿಸಿದ್ದರು. ಸಾವರ್ಜನಿಕ ಶೌಚಗೃಹದಲ್ಲಿ ಇಬ್ಬರು ನನ್ನ ಮೇಲೆ ದಾಳಿ ಮಾಡಿ, ನನ್ನ ಬಳಿ ಇದ್ದ ಹಣ ದೋಚಿಕೊಂಡು ಹೋಗಿದ್ದರು ಎಂದು ಪ್ರವೀಣ್​ ಅಂಗಡಿಗೆ ವಾಪಸ್ ಬಂದು ಹೇಳಿದ್ದ. ಆ ಮೇರೆಗೆ ದೂರು ಕೊಟ್ಟು ಪೊಲೀಸರಿಂದ ತನಿಖೆ ನಡೆದಾಗ ಇದರಲ್ಲಿ ಪ್ರವೀಣ್ ಪಾತ್ರವಿದೆ ಎಂಬುದು ಖಚಿತವಾಗಿ ಆತನ ಬಂಧನವಾಗಿತ್ತು. ಆದರೆ ಮೂರೇ ದಿನಗಳಲ್ಲಿ ಜಾಮೀನು ಪಡೆದು ಪರಾರಿಯಾಗಿದ್ದ ಪ್ರವೀಣ್​ ಬಳಿಕ ನ್ಯಾಯಾಲಯಕ್ಕೂ ಹಾಜರಾಗದೆ ತಲೆಮರೆಸಿಕೊಂಡಿದ್ದ.

    ತಲೆಮರೆಸಿಕೊಂಡಿದ್ದವರನ್ನು ಪತ್ತೆ ಹಚ್ಚುವ ಅಭಿಯಾನದ ಅಂಗವಾಗಿ ಮುಂಬೈ ಪೊಲೀಸರು ಇತ್ತೀಚೆಗೆ ಮತ್ತೆ ಕಾರ್ಯಪ್ರವೃತ್ತರಾದಾಗ ಪ್ರವೀಣ್​ ಹೆಸರೂ ಮುನ್ನೆಲೆಗೆ ಬಂದಿದ್ದು, ಮತ್ತೆ ವಿವರಗಳನ್ನು ಕಲೆ ಹಾಕಲು ಮುಂದಾಗಿದ್ದರು. ಆತ ಕೆಲಸ ಮಾಡುತ್ತಿದ್ದ ಪರೇಲ್ ಪ್ರದೇಶಕ್ಕೆ ಹೋಗಿ ಮತ್ತೆ ವಿಚಾರಣೆ ನಡೆಸಿದಾಗ ಆತ ಎರಡು ಚಿನ್ನದ ಕೃತಕ ಹಲ್ಲುಗಳನ್ನು ಕಟ್ಟಿಸಿಕೊಂಡಿದ್ದ ಮತ್ತು ಆತನ ಊರು ಗುಜರಾತ್​ನ ಕಛ್​ನ ಮಾಂಡವಿ ತಾಲೂಕಿನ ಸಭ್ರಾಯಿ ಎಂಬ ಮಾಹಿತಿ ಸಿಕ್ಕಿತ್ತು.

    ಈ ಎರಡು ಚಿನ್ನದ ಕೃತಕ ಹಲ್ಲುಗಳನ್ನೇ ಪ್ರಮುಖ ಸುಳಿವಾಗಿ ಇರಿಸಿಕೊಂಡು ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ತಮ್ಮ ಮಾಹಿತಿದಾರರಿಗೆ ಪ್ರವೀಣ್​ ಜಡೇಜಾ ಎಂಬಾತನ ಶೋಧದಲ್ಲಿ ಇರುವುದಾಗಿ ತಿಳಿಸಿದ್ದರು. ಆದರೆ ಗುಜರಾತ್​ನ ಕಛ್​ನ ಆ ಪ್ರದೇಶದಲ್ಲಿ ಹಲವು ಮಂದಿ ಪ್ರವೀಣ್ ಜಡೇಜಾ ಅಂತಿದ್ದು, ಅವರ್ಯಾರಿಗೂ ಚಿನ್ನದ ಹಲ್ಲು ಇಲ್ಲ ಎಂದು ಹೇಳಿದ್ದರು. ಅದಾಗ್ಯೂ ಪ್ರದೀಪ್​ಸಿನ್ಹಾ ಜಡೇಜಾ ಅಂತ ಒಬ್ಬನಿದ್ದು, ಆತನಿಗೆ ಎರಡು ಚಿನ್ನದ ಹಲ್ಲುಗಳಿವೆ ಎಂದು ಮಾಹಿತಿದಾರರು ಹೇಳಿದ್ದರು. ಆ ನಂತರ ಅವನ ಫೋಟೋ ತರಿಸಿಕೊಂಡು ನೋಡಿದಾಗ ತಮಗೆ ಬೇಕಾದ ಆರೋಪಿ ಇವನೇ ಎಂಬುದು ಪೊಲೀಸರಿಗೆ ಖಚಿತವಾಗಿತ್ತು.

    ನಂತರ ತಮ್ಮನ್ನು ಎಲ್​ಐಸಿ ಏಜೆಂಟ್​ಗಳು ಎಂದು ಬಿಂಬಿಸಿಕೊಂಡು ಪ್ರವೀಣ್​ನನ್ನು ಸಂಪರ್ಕಿಸಿದ ಪೊಲೀಸರು ಪಾಲಿಸಿ ಮೆಚ್ಯೂರ್ ಆಗಿದೆ, ಅದರ ಹಣ ಸಂಗ್ರಹಿಸಿಕೊಳ್ಳಲು ಮುಂಬೈನ ಸೇವ್ರಿಗೆ ಬರುವಂತೆ ಹೇಳಿ ಕರೆಸಿಕೊಂಡಿದ್ದರು. ಹಾಗೆ ಗುರುವಾರ ಬಂದಿದ್ದ ಪ್ರವೀಣ್​ನನ್ನು ಅಲ್ಲಿ ದೂರುದಾರರು ಮತ್ತು ಒಟ್ಟಿಗೆ ಕೆಲಸ ಮಾಡುತ್ತಿದ್ದವರನ್ನು ಕರೆಸಿ ತೋರಿಸಿ ಅದು ಪ್ರವೀಣ್​ ಜಡೇಜಾ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಯುಕೆಜಿ ಮಗು ಫೇಲ್: ತಪ್ಪು ನಮ್ಮದಲ್ಲ ಎಂದ ಶಾಲೆಯವರು ಶಿಕ್ಷಣ ಇಲಾಖೆಗೆ ನೀಡಿದ ಸ್ಪಷ್ಟನೆ ಇದು..

    110ನೇ ವರ್ಷದಲ್ಲಿ ಹೊಸ ಕೇಶ, ಹೊಸ ಹಲ್ಲು: ‘ಮರುಹುಟ್ಟನ್ನು’ ಸಂಭ್ರಮಿಸಿದ ಮಹಿಳೆ

    ತನ್ನ ನೆಚ್ಚಿನ ನಾಯಕ ಸಿಎಂ ಆಗಲೆಂದು 25 ವರ್ಷದಿಂದ ಗಡ್ಡ ಬಿಟ್ಟ ಅಭಿಮಾನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts