ಚಿಕ್ಕಮಗಳೂರು: ಭೂಮಿ ಮೇಲೆ ಜೀವಿಸುತ್ತಿರುವ ಪ್ರತಿಯೊಂದು ಮಾನವ ಜೀವಿಗಳು ಕೇವಲ ಪಾತ್ರಧಾರಿಗಳು. ನಮ್ಮ ಸೂತ್ರವನ್ನು ಹಿಡಿದು ನಡೆಸುತ್ತಿರುವ ಅಗೋಚರ ಶಕ್ತಿಯೇ ದೇವರು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಆಣೂರು ಗ್ರಾಮದಲ್ಲಿ ಶ್ರೀ ಅಮೃತೇಶ್ವರ ದೇವಸ್ಥಾನದ ಪುನರ್ ನಿರ್ಮಾಣದ ಲೋಕಾರ್ಪಣೆ, ಪರಿವಾರ ದೇವರುಗಳ ಪುನರ್ ಪ್ರತಿಷ್ಟಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವದ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಸೇರಿದಂತೆ ಭೂಮಿ ಮೇಲಿನ ಪ್ರತಿಯೊಂದು ಜೀವಿಗಳಿಗೆ ಜೀವಿಸಲು ಅನೇಕ ಶಕ್ತಿಗಳು ಕಾರಣವಾಗಿವೆ ಎಂದು ವಿಜ್ಞಾನದಿಂದ ತಿಳಿಯಬಹುದು. ಆದರೆ ಭೌತ ಜಗತ್ತಿನ ಸೂತ್ರಗಳು ಜೀವನದಲ್ಲಿ ಅಳವಡಿಕೆಯಾಗುವುದಿಲ್ಲ. ಜೀವನದ ಸುಖ ದುಃಖಗಳಿಗೆ ಅದು ದಾರಿ ತೋರುವುದಿಲ್ಲ. ನಮಗೆ ತಿಳಿಯದೆ ನಡೆಯುವ ಪ್ರತಿಯೊಂದು ಕಾಯಕಗಳಿಗೂ ಸೂತ್ರವನ್ನು ಹಿಡಿದು ನಡೆಸುತ್ತಿರುವ ಅಗೋಚರಶಕ್ತಿಯೇ ದೇವರು ಎಂದರು.
ದೇವಾಲಯಗಳಿಗೆ ತೆರಳುವುದು ಕೇವಲ ಪೂಜೆ ಪುರಸ್ಕಾರಗಳಿಗಲ್ಲ. ಹೋಗಿ ಬರುವ ಪ್ರತಿಯೊಬ್ಬರಲ್ಲೂ ಒಂದು ಧನಾತ್ಮಕ ಶಕ್ತಿ ಮೂಡುತ್ತದೆ. ಧರ್ಮದ ದಾರಿಯಲ್ಲಿ ನಡೆದು ಧರ್ಮವನ್ನು ರಕ್ಷಿಸಲು ದೇವಾಲಯಗಳು ಉತ್ತಮ ಸ್ಥಳಗಳಾಗಿವೆ. ಪರಮಾತ್ಮನ ದಿನ ಅಗಾಧವಾದ ನಂಬಿಕೆ ನಿಮ್ಮನ್ನು ಸದಾ ಉತ್ತಮ ಹಾದಿಯಲ್ಲಿ ನಡೆಸಿ ನೆಮ್ಮದಿ ಜೀವನ ನಡೆಸಲು ದಾರಿ ದೀಪವಾಗುತ್ತದೆ ಎಂದು ಹೇಳಿದರು.
ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಗ್ರಾಮದ ಹಿರಿಯರಾದ ಎ.ಎನ್.ಚಂದ್ರಶೇಖರ್, ಎ.ಟಿ.ರಮೇಶ್, ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಚ್.ಸಿ.ಮಂಜುನಾಥಗೌಡ, ಕಾರ್ಯದರ್ಶಿ ಜಿ.ಎನ್.ರಮೇಶ್, ಸದಸ್ಯರಾದ ಎಂ.ಎಸ್.ವಿನುತಾ, ಎ.ಆರ್.ಧರ್ಮೇಂದ್ರ, ಎಚ್.ಸಿ.ಸಚಿನ್, ಎ.ಆರ್.ಹೇಮಾ, ಸಚಿನ್ಕುಮಾರ್, ತಿಮ್ಮಯ್ಯ, ಸೋಮಶೇಖರ್, ಎಚ್.ಡಿ. ಕೃಷ್ಣೇಗೌಡ, ನಂಜುಂಡೇಗೌಡ, ಮಲ್ಲೇಶಗೌಡ, ಶಿವಕುಮಾರ್ ಮತ್ತಿತರರಿದ್ದರು.