ಹನೂರು: ರೈತರ ಮನವಿ ಮೇರೆಗೆ ತಾಲೂಕಿನ 5 ಗ್ರಾಮಗಳಲ್ಲಿ ಮಂಗಳವಾರದಿಂದ ಗೋ ಶಾಲೆ ಆರಂಭಿಸಲಾಗಿದ್ದು ಜಾನುವಾರುಗಳಿಗೆ ಮೇವು ಪೂರೈಸಲಾಗುತ್ತಿದೆ.
ಈ ಬಾರಿ ಮಳೆಯಿಲ್ಲದ ಪರಿಣಾಮ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತು. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿತ್ತು. ಪರಿಣಾಮ ಗೋ ಶಾಲೆ ತೆರೆಯುವಂತೆ ರೈತರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪಶು ವೈದ್ಯಕೀಯ ಇಲಾಖೆಯಿಂದ ಏ.6 ರಂದು ತಾಲೂಕಿನ ಕೌದಳ್ಳಿ, ಕುರಟ್ಟಿ ಹೊಸೂರು, ದಂಟಳ್ಳಿ, ಭದ್ರಯ್ಯನಹಳ್ಳಿ, ಶೆಟ್ಟಳ್ಳಿ ಸೇರಿದಂತೆ 9 ಗ್ರಾಮಗಳಲ್ಲಿ ತಾತ್ಕಲಿಕ ಗೋ ಶಾಲೆ ತೆರೆಯಲಾಗಿತ್ತು. ಆದರೆ, ಮೇವಿನ ಸಮಸ್ಯೆ ಇರುವ ಇತರೆ ಗ್ರಾಮಗಳಲ್ಲಿ ಗೋ ಶಾಲೆ ತೆರೆದಿರಲಿಲ್ಲ.
ಈ ನಡುವೆ ಏ.15 ರಂದು ಕೌದಳ್ಳಿ ಹಾಗೂ ಶೆಟ್ಟಿಳ್ಳಿ ಗ್ರಾಮದ ಗೋ ಶಾಲೆಗೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರು ಭೇಟಿ ನೀಡಿದ್ದ ವೇಳೆ ವಿವಿಧ ಗ್ರಾಮದ ರೈತರು ಗೋ ಶಾಲೆ ತೆರೆಯುವಂತೆ ಮನವಿ ಮಾಡಿದ್ದರು. ಪರಿಣಾಮ ತಾಲೂಕಿನ ಕೆಂಚಯ್ಯನದೊಡ್ಡಿ, ಪುದುನಗರ, ಶಾಗ್ಯ, ಕಳ್ಳಿದೊಡ್ಡಿ ಹಾಗೂ ಗಾಣಿಗಮಂಗಲ ಗ್ರಾಮದಲ್ಲಿ ಗೋ ಶಾಲೆ ತೆರೆದು ಜಾನುವಾರುಗಳಿಗೆ ಮೇವು ಪೂರೈಸಲಾಗುತ್ತಿದೆ.