ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಟರ್ಮಿನಲ್ನಲ್ಲೇ ಬಿಟ್ಟು ವಿಮಾನ ಟೇಕಾಫ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಗೋ ಫಸ್ಟ್ ಏರ್ಲೈನ್ಸ್ ಸಂಸ್ಥೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಈ ಘಟನೆ ಜ.9ರಂದು ಬೆಳಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಡೆದಿತ್ತು. ರಾಜ್ಯ ರಾಜಧಾನಿ ಬೆಂಗಳೂರಿನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ G8 116 ನಂಬರ್ನ ಗೋಫಸ್ಟ್ ವಿಮಾನ ಹೊರಟಿತ್ತು. ಮೊದಲನೇ ಟ್ರಿಪ್ನಲ್ಲಿ ವಿಮಾನಕ್ಕೆ ಬಸ್ನಲ್ಲಿ ಹೋಗಿ 50 ಜನ ಪ್ರಯಾಣಿಕರು ಹತ್ತಿದ್ದರು. ಎರಡನೇ ಟ್ರಿಪ್ನಲ್ಲಿ 54 ಜನರನ್ನು ಟರ್ಮಿನಲ್ನಿಂದ ವಿಮಾನದ ಬಳಿಗೆ ಬಸ್ ಕರೆದೊಯ್ಯಬೇಕಿತ್ತು. ಆದರೆ, ಬಸ್ ಪ್ರಯಾಣಿಕರನ್ನು ಕರೆತರುವ ಮುನ್ನವೆ ವಿಮಾನ ಟೇಕಾಫ್ ಆಗಿತ್ತು. ಪ್ರಯಾಣಿಕರನ್ನು ಗಮನಿಸದೆ ಏರ್ಲೈನ್ಸ್ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ ಅಂತ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ, ಗೋಫಸ್ಟ್ ಏರ್ಲೈನ್ಸ್ ವಿರುದ್ಧ ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರು ಅಸಮಾಧಾನ ಹೊರ ಹಾಕಿದ್ದರು. ಸಾಮಾಜಿಕ ಜಾಲತಾಣದಲ್ಲೂ ಭಾರೀ ಟೀಕೆ ವ್ಯಕ್ತವಾಗಿತ್ತು.
@DGCAIndia @Officejmscindia @AmitShahOffice @official_Arnab_ Go first G8 116 flight Blore-delhi, 54 passengers were left in the bus post final on-board, the flight took off with luggages and left 54 passengers at the airport, serious security branch. passenger's are struggling. pic.twitter.com/MhwG7vI7UZ
— Neeraj Bhat (@neerajbhat001) January 9, 2023
ಟ್ವಿಟರ್ನಲ್ಲಿ ಗೋಫಸ್ಟ್ ಮತ್ತು ಡಿಜಿಸಿಎಗೆ 50 ಕ್ಕೂ ಅಧಿಕ ಪ್ರಯಾಣಿಕರು ಟ್ವೀಟ್ ಮಾಡಿ ಸಮಯಕ್ಕೆ ಸರಿಯಾಗಿ ಹೋಗಲು ಆಗಿಲ್ಲ ಅಂತ ಬೇಸರ ಹೊರಹಾಕಿದ್ದರು. ಇದಾದ ಬಳಿಕ ಗೋಫಸ್ಟ್ ಸಂಸ್ಥೆಗೆ ಡಿಜಿಸಿಎ ಶೋಕಾಸ್ ನೋಟಿಸ್ ನೀಡಿ, ಕಾರಣ ತಿಳಿಸುವಂತೆ ಹೇಳಿತ್ತು. ಅಲ್ಲದೆ, ತಮ್ಮ ನಿಯಂತ್ರಕ ಕಟ್ಟುಪಾಡುಗಳ ಲೋಪಕ್ಕಾಗಿ ವಿಮಾನಯಾನ ಸಂಸ್ಥೆಯ ವಿರುದ್ಧ ಏಕೆ ಜಾರಿ ಕ್ರಮ ತೆಗೆದುಕೊಳ್ಳಬಾರದು ಎಂದು ಕೇಳಿತ್ತು.
ಇದಕ್ಕೆ ಜನವರಿ 25ರಂದು ಗೋಫಸ್ಟ್ ಏರ್ಲೈನ್ ಸಂಸ್ಥೆ ಉತ್ತರ ನೀಡಿತ್ತು. ವಾಣಿಜ್ಯ ಸಿಬ್ಬಂದಿ ಮತ್ತು ಸಿಬ್ಬಂದಿ ನಡುವೆ ವಿಮಾನದಲ್ಲಿ ಪ್ರಯಾಣಿಕರನ್ನು ಹತ್ತುವುದಕ್ಕೆ ಸಂಬಂಧಿಸಿದಂತೆ ಅಸಮರ್ಪಕ ಸಂವಹನ ಮತ್ತು ಸಮನ್ವಯದ ಕೊರತೆಯಿಂದ ತಪ್ಪು ನಡೆದಿದೆ ಎಂದು ಹೇಳಿತ್ತು. ಆದರೆ, ಈ ಉತ್ತರ ಡಿಜಿಸಿಎಗೆ ಸಮಾಧಾನ ನೀಡದಿದ್ದರಿಂದ 10 ಲಕ್ಷ ರೂಪಾಯಿ ದಂಡ ವಿಧಿಸಿದೆ. (ಏಜೆನ್ಸೀಸ್)
54 ಪ್ರಯಾಣಿಕರನ್ನು ಟರ್ಮಿನಲ್ನಲ್ಲೇ ಬಿಟ್ಟು ಟೇಕಾಫ್ ಆದ ವಿಮಾನ; ಎಡವಟ್ಟು ಮಾಡಿಕೊಂಡಿದ್ದ ಸಿಬ್ಬಂದಿ ಅಮಾನತು
ಮಕ್ಕಳಿಬ್ಬರನ್ನು ಕೊಂದು ಪತ್ನಿಯೊಂದಿಗೆ ಸಾವಿನ ಶರಣಾದ ಬಿಜೆಪಿ ನಾಯಕ: ಟ್ವೀಟ್ನಲ್ಲಿತ್ತು ಸಾವಿನ ರಹಸ್ಯ
ನರೇಶ್-ಪವಿತ್ರಾ ಲೋಕೇಶ್ ಪ್ರಕರಣದಲ್ಲಿ ಸ್ಫೋಟಕ ಟ್ವಿಸ್ಟ್: 3ನೇ ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿದ ನರೇಶ್