ಎನ್.ಆರ್.ಪುರ: ಭದ್ರಾ ಡ್ಯಾಂಗಾಗಿ ಭೂಮಿ ಕಳೆದುಕೊಂಡ ಪರಿಶಿಷ್ಟ ಪಂಗಡದವರಿಗೆ ಲಿಂಗಾಪುರ, ಸೂಸಲವಾನಿ ಗ್ರಾಮದಲ್ಲಿ ಸರ್ಕಾರ ನೀಡಿದ ಬದಲಿ ಭೂಮಿಗೆ ಸಾಗುವಳಿ ಚೀಟಿ ಕೊಡಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಬಣ) ಪದಾಧಿಕಾರಿಗಳು ತರೀಕೆರೆ ಉಪ ವಿಭಾಗಾಧಿಕಾರಿ ಕಾಂತರಾಜ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಲಿಂಗಾಪುರ, ಸೂಸಲವಾನಿ ಗ್ರಾಮದಲ್ಲಿ ಮೇದರ ಜನಾಂಗ ಹಾಗೂ ಪೌರ ಕಾರ್ಮಿಕರು ಸೇರಿ 12 ಜನರಿಗೆ ಸರ್ಕಾರ 1984ರಲ್ಲಿ ಬದಲಿ ಭೂಮಿ ನೀಡಿತ್ತು. ಈ ಜಾಗಕ್ಕೆ ಕಲ್ಲುಬಾಂದು ಹಾಕಿ ನಕ್ಷೆ ತಯಾರಿಸಲಾಗಿದೆ. ನಂತರ ಅರಣ್ಯ ಇಲಾಖೆಗೆ ಕಡತಗಳು ಹೋದಾಗ ಜಾಗ ಅರಣ್ಯ ಇಲಾಖೆಯದ್ದು ಎಂದು ತಿಳಿಸಿದೆ. ಇದರಿಂದ ಇದುವರೆಗೂ ಸಾಗುವಳಿ ಚೀಟಿ ಸಿಕ್ಕಿಲ್ಲ ಎಂದು ದೂರಿದರು.
ಕಡಹಿನಬೈಲು ಗ್ರಾಪಂ ಬಾಳೆಕೊಪ್ಪ ಗ್ರಾಮದಲ್ಲಿ 1984ರಲ್ಲಿ ಪ.ಪಂಗಡದ 6 ರೈತರಿಗೆ ಕಷಿ ಭೂಮಿ ನೀಡಿದ್ದು ಹಂಗಾಮಿ ಸಾಗುವಳಿ ಚೀಟಿ ನೀಡಲಾಗಿದೆ. ನಕ್ಷೆ ಕೂಡ ಆಗಿದೆ. ಭೂಮಿಗೆ ಕಲ್ಲುಬಾಂದು ಹಾಕಿಸಿ ಕೃಷಿ ಮಾಡಲು ಅನುಕೂಲ ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು.
ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಡಿ.ರಾಮು, ಶೃಂಗೇರಿ ಕ್ಷೇತ್ರ ಕಾರ್ಯದರ್ಶಿ ಕೆ.ಶ್ರೀನಾಥ್, ವಾಲ್ಮೀಕಿ ನಾಯಕ ಯುವಕ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗರಾಜ್, ಡಿಎಸ್ಎಸ್ ಮುಖಂಡರಾದ ಮಂಜು, ಲತಾ, ಜಯಮ್ಮ, ಹನುಮಂತ, ಜಾರ್ಜ್, ಗೋವಿಂದಪ್ಪ, ಜಯರಾಂ, ವೆಂಕಟೇಶ್, ಕುಮಾರ್, ನಾಗೇಶ್ ಇದ್ದರು.