ಬೆಂಗಳೂರು: ಬರಗಾಲದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡುವಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಮನ ಸೆಳೆಯಿತು.
ಮಳೆ ಕೈಕೊಟ್ಟ ಪರಿಣಾಮ ಶೇ.50 ರಷ್ಟು ಬೆಳೆ ನಷ್ಟವಾಗಿದೆ. ಈ ಬೆಳೆ ಸಮೀಕ್ಷೆ ಸಮಗ್ರವಾಗಿ ನಡೆದಿಲ್ಲ. ಬೆಳೆ ನಷ್ಟ ಅಂದಾಜು ಸಮೀಕ್ಷೆಯಲ್ಲಿ ಕಬ್ಬು ಬೆಳೆ ಸೇರಿಸಿಲ್ಲ. ಶೇ.50 ರಷ್ಟು ಕಬ್ಬು ಬೆಳೆಗಾರರು ಬರದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಕಬ್ಬು ಬೆಳೆಯನ್ನು ಬರ ಪರಿಹಾರ ನಷ್ಟಕ್ಕೆ ಸೇರಿಸಬೇಕು ಎಂದು ನಿಯೋಗ ಆಗ್ರಹಿಸಿತು.
ಕಬ್ಬಿನ ಬಾಕಿ ಬಿಡುಗಡೆಗೆ ಒತ್ತಾಯ
ಕೆಲವು ಜಿಲ್ಲೆಗಳಲ್ಲಿ ಖಾಸಗಿ ೈನಾನ್ಸರುಗಳು ಸಾಲ ವಸೂಲಿಗೆ ರೈತರನ್ನು ಪೀಡಿಸುತ್ತಿದ್ದಾರೆ. ಅಂತಹವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತು.
ಸಕ್ಕರೆ ಕಾರ್ಖಾನೆ ಮಾಲೀಕರು ಸಕ್ಕರೆ ಇಳುವರಿಯಲ್ಲಿ ಮೋಸ ಮಾಡುತ್ತಿದ್ದಾರೆ. ಕಬ್ಬಿಗೆ ಕಳೆದ ವರ್ಷ ಸರ್ಕಾರ ನಿಗದಿ ಮಾಡಿದ ಹೆಚ್ಚುವರಿ ದರ 150 ರೂ.ಗಳನ್ನು ಯಾವ ಕಾರ್ಖಾನೆಗಳೂ ಪಾವತಿ ಮಾಡಿಲ್ಲ. ಸುಮಾರು 950 ಕೋಟಿ ರೂ. ಬಾಕಿ ಇದೆ. ಅದನ್ನು ಕೂಡಲೇ ಕೊಡಿಸಬೇಕು. ಬೀದರ್ ಜಿಲ್ಲೆಯ ಕಾರಂಜ ಜಲಾಶಯಕ್ಕೆ ಭೂಮಿ ಕಳೆದುಕೊಂಡಿರುವ ರೈತರು ಪರಿಹಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಸೋಲಾರ್ ವಿದ್ಯುತ್ಗೆ ಧನ ಸಹಾಯ
ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸೋಲಾರ್ ವಿದ್ಯುತ್ ಯೋಜನೆಗೆ 60 ರಷ್ಟು ಸಹಾಯಧನ ನೀಡುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ 30 ರಷ್ಟು ಸಹಾಯ ಧನ ನೀಡಿದರೆ ರೈತರಿಗೆ ಹಗಲು ವೇಳೆ ವಿದ್ಯುತ್ ಸಿಗುವಂತಾಗುತ್ತದೆ. ಕೆಐಡಿಬಿಯವರು ರೈತರ ಜಮೀನು ಭೂ ಸ್ವಾಧೀನ
ಪಡಿಸಿಕೊಂಡಿರುವ ಭೂಮಿ ಪರಿಹಾರ ನೀಡಲು ವಿಳಂಬವಾಗುತ್ತಿದೆ. ವರ್ಷಗಟ್ಟಲೆ ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಭೂಮಿ ಕಳೆದುಕೊಂಡ ರೈತರ ಮಕ್ಕಳನ್ನು ಸಂಬಂಧ ಪಟ್ಟ ಕಂಪನಿಗಳು ಕುಟುಂಬಕ್ಕೆ ಒಂದು ಕೆಲಸನೀಡಬೇಕೆಂಬ ನಿಯಮ ಉಲ್ಲಂಸಿ ಕೆಲಸಕ್ಕೆ ತೆಗೆದುಕೊಳ್ಳದ ಕಾರಣ ಬಿಹಾರ ಮತ್ತಿತರ ರಾಜ್ಯಗಳಿಗೆ ಯುವಕರು ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆ.
ಮದುವೆಯಾಗುವ ಹೆಣ್ಣಿಗೆ ಸರ್ಕಾರಿ ಉದ್ಯೋಗ
ಕೃಷಿ ಕ್ಷೇತ್ರ ದುರ್ಬಲವಾಗುತ್ತಿದೆ. ರೈತರ ಮಕ್ಕಳು ವ್ಯವಸಾಯದಿಂದ ದೂರವಾಗುತ್ತಿದ್ದಾರೆ. ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವೆಂಬ ಬೇಸರವಿದೆ. ಅಂತರ್ಜಾತಿ ವಿವಾಹವಾಗುವ ದಂಪತಿಗೆ ಸರ್ಕಾರದಿಂದ 5 ಲಕ್ಷ ರೂ. ಧನ ಸಹಾಯ ನೀಡಾಗುತ್ತದೆ. ಅದೇ ರೀತಿ ರೈತರ ಮಗನ ಮದುವೆಯಾಗುವ ಹೆಣ್ಣಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.10 ಮೀಸಲಾತಿ ಕೊಡಬೇಕೆಂಬ ನಿಯಮ ಜಾರಿಗೆ ತರಬೇಕು ಎಂದು ಕುರುಬೂರು ಶಾಂತಕುಮಾರ್ ನಿಯೋಗ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.