ಜೇವರ್ಗಿ: ಸಮರ್ಪಕ ಮಳೆ ಇಲ್ಲದಿರುವುದರಿಂದ ಎಲ್ಲೆಡೆ ಬರ ಆವರಿಸಿದ್ದು, ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಕೂಡಲೇ ಪ್ರತಿ ಎಕರೆಗೆ 25 ಸಾವಿರ ರೂ. ಬರ ಪರಿಹಾರ ನೀಡಬೇಕು, ಮಹಾರಾಷ್ಟçದಿಂದ ಭೀಮಾ ನದಿಗೆ ನೀರು ಹರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯಿಂದ ರಸ್ತೆಯಲ್ಲಿ ಸಂಚಾರ ತಡೆದು ಗುರುವಾರ ಪ್ರತಿಭಟನೆ ನಡೆಸಲಾಯಿತು.
ತಾಲೂಕು ಅಧ್ಯಕ್ಷ ಯಲ್ಲಪ್ಪ ಬಂಕಲಗಿ ಮಾತನಾಡಿ, ಮಹಾರಾಷ್ಟçದ ಉಜನಿ ಜಲಾಶಯದಿಂದ ಬಚಾವತ್ ಆಯೋಗದ ತೀರ್ಪಿನಂತೆ 15 ಟಿಎಂಸಿ ನೀರು ಭೀಮೆಗೆ ಹರಿಸಬೇಕು. ಇದೀಗ ಬರ ಆವರಿಸಿದ್ದರಿಂದ 5 ಟಿಎಂಸಿ ನೀರಾದರೂ ಹರಿಸಬೇಕು. ರೈತರ ಪಂಪ್ಸೆಟ್ಗಳಿಗೆ 10 ತಾಸು ವಿದ್ಯುತ್ ಕೊಡಬೇಕು. ಗ್ರಾಮೀಣ ಪ್ರದೇಶದಲ್ಲಿ ಪಡಿತರ ಚೀಟಿ, ಆಧಾರ್ ನೋಂದಣಿ, ಜನನ ಹಾಗೂ ಮರಣ ಪ್ರಮಾಣ ಪತ್ರ ಸೇರಿ ಇನ್ನಿತರ ಸೇವೆಗಳಿಗಾಗಿ ಗ್ರಾಮ ಪಂಚಾಯಿತಿಯಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ನಿಂಗರಾಜ ಬಣಮಗಿ, ಶಾಂತಗೌಡ ಹುಲ್ಲೂರ, ಸುರೇಖಾ ಪಾಟೀಲ್, ಅಮೃತಗೌಡ ಪಾಟೀಲ್, ಸುರೇಶ ಸಾಗರ, ಮಲ್ಲಿಕಾರ್ಜುನ ಬಿರಾದಾರ, ವಿಶ್ವನಾಥ ನಾಟಿಕಾರ, ಬಸವರಾಜ ನಾಯ್ಕೋಡಿ, ರಮೇಶ ಉಪಾಸಿ, ರೇವಣಸಿದ್ದ ಗಡೇದ್, ಕಲ್ಲಪ್ಪ ಪೂಜಾರಿ, ಮಹಾಂತಗೌಡ ಪಾಟೀಲ್, ಭೀಮು ಸುಣಗಾರ, ಶ್ರವಣಕುಮಾರ ಶಹಾಬಾದ್, ಅನೀಲ ಬಣಮಗಿ, ಸೋಹಿಲ್ ಟೆಕ್ಕಿ, ಖಾಸಿಂ, ಅನೀಲ್ ಹಜೇರಿ ಇತರರಿದ್ದರು.