ಬೆಂಗಳೂರು: ಗ್ಯಾಸ್ ಸಿಲಿಂಡರ್ ಸಾಗಿಸುವ ಆಟೋಚಾಲಕನೊಬ್ಬನ ನಿರ್ಲಕ್ಷ್ಯಕ್ಕೆ ಬಾಲಕಿಯೊಬ್ಬಳು ಅನ್ಯಾಯವಾಗಿ ಬಲಿಯಾದಂತಾಗಿದೆ. ರಾಜಧಾನಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.
ನಾಗಮಂಗಲ ಮೂಲದ ನಾಲ್ಕೂವರೆ ವರ್ಷದ ಭುವನಾ ಸಾವಿಗೀಡಾದ ಬಾಲಕಿ. ಘಟನೆ ಬಳಿಕ ಆಟೋ ಚಾಲಕ ಧನಂಜಯ ಪರಾರಿಯಾಗಿದ್ದಾನೆ. ಬಾಲಕಿ ತಾಯಿಯೊಂದಿಗೆ ರಸ್ತೆ ಬದಿಯಲ್ಲಿ ಎಳನೀರು ಸಾಗಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.
ನಾಗಮಂಗಲ ಮೂಲದ ದಂಪತಿ ಬೆಂಗಳೂರಿನ ಕಾವೇರಿಪುರದಲ್ಲಿ ನೆಲೆಸಿದ್ದು, ಇಂದು ಬಾಲಕಿಯನ್ನು ತಾಯಿ ಎಳನೀರು ಕುಡಿಯಲು ಕರೆದುಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ಅಲ್ಲೇ ಪಕ್ಕದಲ್ಲೇ ನಿಲ್ಲಿಸಿದ್ದ ಗ್ಯಾಸ್ ಸಾಗಿಸುವ ಆಟೋದ ಚಾಲಕ ಆಟೋ ಹ್ಯಾಂಡ್ ಬ್ರೇಕ್ ಹಾಕದೆ ಆಟೋದಿಂದ ಇಳಿದಿದ್ದರಿಂದ ಅದು ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿ ತಾಯಿ ಮಗಳಿಗೆ ಡಿಕ್ಕಿ ಹೊಡದಿದೆ. ಈ ಸಂದರ್ಭದಲ್ಲಿ ಬಾಲಕಿಯ ಕುತ್ತಿಗೆ ಮೇಲೆ ಆಟೋ ಸಾಗಿದೆ.
ಆಟೋ ಚಾಲಕ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಬಾಲಕಿ ಬದುಕುಳಿಯಲಿಲ್ಲ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಾಲಕಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಆಟೋ ಚಾಲಕ ಧನಂಜಯ ಪರಾರಿಯಾಗಿದ್ದು, ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಯಾಗದ ಚಿಂತೆ; ಬಣ್ಣ ಬಳಿಯೋ ನೆಪದಲ್ಲಿ ಕೋಣೆಗೆ ಹೋಗಿ ವಿಷ ಕುಡಿದು ಸತ್ತ..