ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿಯಲ್ಲಿ ವಿಜಯವಾಣಿ ಹಾಗೂ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಮೂರನೇ ಬಾರಿ ಆಯೋಜನೆಗೊಂಡ ಎಜ್ಯಕೆಶನ್ ಎಕ್ಸಪೋಗೆ ಸೋಮವಾರ ಅದ್ದೂರಿ ಚಾಲನೆ ಸಿಕ್ಕಿದೆ.
ಇಲ್ಲಿನ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿರುವ ಮೇಳಕ್ಕೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಚಾಲನೆ ನೀಡುವ ಮೂಲಕ ಎಕ್ಸಪೋ ಶುಭಾರಂಭಗೊಂಡಿದೆ.
ವಿಘ್ನ ವಿನಾಶಕನ ಮೂರ್ತಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಮೇಳಕ್ಕೆ ವಿದ್ಯುಕ್ತ ಚಾಲನೆ ನೀಡಿದ ಸಚಿವ ಎಂ.ಬಿ. ಪಾಟೀಲರು ಪ್ರತಿಯೊಂದು ಮಳಿಗೆಗೆ ಭೇಟಿ ನೀಡಿ ಮಾಹಿತಿ ಪಡೆದರು.
ನಾಡಿನ ನಾನಾ ಭಾಗಗಳಿಂದ ಆಗಮಿಸಿದ ಶಿಕ್ಷಣ ಸಂಸ್ಥೆಗಳ ಮಳಿಗೆಗಳಿಗೆ ಭೇಟಿ ನೀಡಿ ವಿವರ ಪಡೆದ ಸಚಿವರು ಎಕ್ಸಪೋ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಇಂಥ ಮೇಳಗಳು ಆಗಾಗ ಆಯೋಜಿಸುವ ಮೂಲಕ ಈ ಭಾಗದ ಶಿಕ್ಷಣಾಕಾಂಕ್ಷಿಗಳ ಜ್ಞಾನದಾಹ ತೀರಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು, ಶಿಕ್ಷಣ ಸಂಸ್ಥೆಗಳ ಸಮಗ್ರ ಮಾಹಿತಿ ಕಲ್ಪಿಸಲು ಈ ಎಕ್ಸಪೋ ತುಂಬ ಸಹಕಾರಿಯಾಗಲಿದೆ. ಪಾಲಕರು ಮತ್ತು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್ ಪಿ ಋಷಿಕೇಶ ಸೋನಾವಣೆ, ಇಸ್ರೋ ವಿಜ್ಞಾನಿ ವಿಲಾಸ ರಾಠೋಡ, ಆಧ್ಯಾತ್ಮ ಚಿಂತಕರಾದ ಕನ್ನೂರಿನ ಕೃಷ್ಣ ಸಂಪಗಾಂವಕರ ಮತ್ತಿತರರು ಉಪಸ್ಥಿತಿರಿದ್ದು ಎಜ್ಯುಕೇಶನ್ ಎಕ್ಸಪೋಗೆ ಶುಭಕೋರಿದರು. ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.