ಬಾಳೆಹೊನ್ನೂರು: ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಇಲಾಖೆಯಲ್ಲಿ ರೈತರಿಗೆ 7.5 ಎಚ್ಪಿವರೆಗಿನ ಸೋಲಾರ್ ಪಂಪ್ಸೆಟ್ ಅಳವಡಿಸಲು ಕುಸುಮ್ ಬಿ ಮತ್ತು ಕುಸುಮ್ ಸಿ ಎಂಬ ಯೋಜನೆ ಜಾರಿಗೆ ತರಲಾಗಿದೆ ಎಂದು ಕೆಆರ್ಇಡಿಎಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.
ಕೇಂದ್ರ ಸರ್ಕಾರದ ಶೇ.50 ಹಾಗೂ ರಾಜ್ಯ ಸರ್ಕಾರದ ಶೇ.30 ಅನುದಾನದಲ್ಲಿ ಒಟ್ಟು ಶೇ.80 ಸಬ್ಸಿಡಿಯೊಂದಿಗೆ ಸೋಲಾರ್ ಪಂಪ್ಸೆಟ್ ಅಳವಡಿಸಲು ಅವಕಾಶವಿದೆ. ರಾಜ್ಯದಲ್ಲಿ 40 ಸಾವಿರ ರೈತರು ಪಂಪ್ಸೆಟ್ ಅಳವಡಿಸಬಹುದು. ಯೋಜನೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ರೈತರು ಜಮೀನಿನಲ್ಲಿ ಜಾಗ ಖಾಲಿ ಇದ್ದರೆ ಸೋಲಾರ್ ಪ್ಯಾನಲ್ ಅಳವಡಿಸಲು ಅವಕಾಶವಿದೆ. ಹೆಚ್ಚು ವಿದ್ಯುತ್ ಉತ್ಪಾದನೆಗೊಂಡಲ್ಲಿ ಗ್ರಿಡ್ಗೆ ವರ್ಗಾಯಿಸುವ ವ್ಯವಸ್ಥೆಯೂ ಇದೆ. ನವೀಕರಿಸಬಹುದಾದ ಇಂಧನ ನಿಗಮ ಅರಣ್ಯ ಇಲಾಖೆಯೊಂದಿಗೂ ಸಭೆ ನಡೆಸಿ ಹೈಡಲ್ ವಿದ್ಯುತ್ ಉತ್ಪಾದನೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುವುದು. ಸೋಲಾರ್ ಉತ್ಪಾದನೆಯಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.