ಗಂಗಾವತಿ: ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ನವವೃಂದಾವನ ಗಡ್ಡಿಯಲ್ಲಿ ಮಂತ್ರಾಲಯದ ದಾಸ ಸಾಹಿತ್ಯ ಪ್ರಾಜೆಕ್ಟ್ನಿಂದ ಸೋಮವಾರ ಶ್ರೀಮಧ್ವನವಮಿ ಉತ್ಸವ ನಡೆಯಿತು.
ಶ್ರೀರಂಗನಾಥ ದೇವಾಲಯದಿಂದ ತುಂಗಭದ್ರಾ ನದಿ ತೀರದವರೆಗೆ ಶ್ರೀ ಮಧ್ವಾಚಾರ್ಯರ ಭಾವಚಿತ್ರದ ಮೆರವಣಿಗೆ, ನಗರ ಸಂಕೀರ್ತನೆ, ವಿವಿಧ ಭಜನೆ ಮಂಡಳಿಗಳಿಂದ ಶೋಭಾಯಾತ್ರೆ ಹಾಗೂ ಯತಿವರ್ಯರ ವೃಂದಾವನಕ್ಕೆ ವಿಶೇಷ ಪೂಜೆ, ಅಭಿಷೇಕ, ಅರ್ಚನೆ, ಅಲಂಕಾರ, ನೈವೇದ್ಯ ಮತ್ತು ಮಹಾ ಮಂಗಳಾರತಿ ನೆರವೇರಿಸಲಾಯಿತು. ಪ್ರಾಜೆಕ್ಟ್ ರಾಜ್ಯ ಸಂಚಾಲಕ ಸುಳಾದಿ ಹನುಮೇಶಾಚಾರ್ಯರಿಂದ ಸುಪ್ರಭಾತ ಮತ್ತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಶಾಖಾ ಮಠದ ವ್ಯವಸ್ಥಾಪಕ ಸುಮಂತ್ ಕುಲಕರ್ಣಿ ಮಾತನಾಡಿ, ಧಾರ್ಮಿಕ ಚಟುವಟಿಕೆ ಮತ್ತು ಸಂಕೀರ್ತನೆ ನಿರಂತರವಾಗಿಡುವ ನಿಟ್ಟಿನಲ್ಲಿ ಮಂತ್ರಾಲಯ ಮಠದಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಅರ್ಚಕರಾದ ನರಸಿಂಹ ಆಚಾರ್ಯ, ವಿಜಿಯೀಂದ್ರ ಆಚಾರ್ಯ, ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ ಇತರರಿದ್ದರು.