ಕಾರವಾರ/ಹಳಿಯಾಳ: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ಸದಸ್ಯನನ್ನು ಅಪಹರಣ ಮಾಡಿದ ಆರೋಪದ ಮೇರೆಗೆ ಶುಕ್ರವಾರ ಮೂವರನ್ನು ಬಂಧಿಸಲಾಗಿದೆ.
ಗಂಗಾವತಿ ಕಾರ್ಪೋರೇಟರ್ ಮನೋಹರಸ್ವಾಮಿ ಎಂಬುವವರನ್ನು ಅಪಹರಿಸಿ ಹಳಿಯಾಳಕ್ಕೆ ಕರೆತಂದಿದ್ದ ಗಂಗಾವತಿಯ ರಾಕೇಶ ಅಡಿವೆಪ್ಪ ನಾಯಕ (24), ಬಸವರಾಜ ಮಲ್ಲಪ್ಪ ಉಪ್ಪಾರ (22), ಶರಣಬಸು ಬಸವರಾಜ ವಂಕಲಕುಂಟೆ (24) ಬಂಧಿತರು. ಇನ್ನೊಬ್ಬ ಆರೋಪಿ ಲಿಂಗರಾಜ ಕ್ಯಾಂಪ್ನ ರವಿ ಕುರುಬರ ತಲೆಮರೆಸಿಕೊಂಡಿದ್ದಾನೆ.
ನ.2ರಂದು ಗಂಗಾವತಿ ನಗರಸಭೆಗೆ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ತಮ್ಮ ಪರ ಅಭ್ಯರ್ಥಿಯನ್ನು ಬೆಂಬಲಿಸುವ ಸಲುವಾಗಿ ಅ.29ರಂದು ಕಾರ್ಪೋರೇಟರ್ ಮನೋಹರಸ್ವಾಮಿಯನ್ನು ಗಂಗಾವತಿಯ ಬಾರ್ವೊಂದರಿಂದ ನಾಲ್ವರು ಅಪಹರಿಸಿದ್ದರು. ಈ ವೇಳೆ ಮಬ್ಬು ಬರುವ ಸ್ಪ್ರೇ ಸಿಂಪಡಿಸಿದ್ದರು. ಇನ್ನೊವಾ ಕಾರಿನಲ್ಲಿ ಕಾರ್ಪೋರೇಟರ್ನನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳಕ್ಕೆ ಕರೆ ತಂದಿದ್ದರು.
ಇಲ್ಲಿನ ಲಾಡ್ಜ್ವೊಂದಕ್ಕೆ ಸ್ಥಳಾಂತರಿಸುವ ವೇಳೆ ಬೆಳಗಿನ ಜಾವ 4.20ರ ಸುಮಾರಿಗೆ ಕಾರ್ಪೋರೇಟರ್ ಕೂಗಿಕೊಂಡಿದ್ದರು. ಅವರನ್ನು ಹಳಿಯಾಳ ಪೊಲೀಸರು ರಕ್ಷಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಅಪಹರಣ ಸಂಬಂಧ ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲರನ್ನೂ ಗಂಗಾವತಿ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಎಸ್ಪಿ ಶಿವಪ್ರಕಾಶ ದೇವರಾಜು ಮಾಹಿತಿ ನೀಡಿದ್ದಾರೆ.
ಈ ಪ್ರಕರಣ ಕುರಿತು ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕ ಶಿವರಾಜ ತಂಗಡಗಿ, ಕಿಡ್ನಾಪ್ ಮಾಡುವ ಸಂಸ್ಕೃತಿಯನ್ನು ಕೊಪ್ಪಳ ಜಿಲ್ಲೆಗೆ ಬಿಜೆಪಿ ಪರಿಚಯಿಸಿದೆ ಎಂದು ಕಿಡಿಕಾರಿದ್ದಾರೆ.
‘ಕನಕಪುರ ಬಂಡೆಯಲ್ಲಿ ಕ್ರಿಶ್ಚಿಯನ್ ಮೂರ್ತಿ ಸ್ಥಾಪಿಸುವಾಗ ಒಕ್ಕಲಿಗರು ನೆನಪಾಗಲಿಲ್ಲವೇ?’