ಗಂಗಾವತಿ: ಗ್ರಾಮಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದ್ದು ಅನುದಾನ ಕ್ರೋಢಿಕರಣದೊಂದಿಗೆ ಕ್ಷೇತ್ರದಲ್ಲಿ ಶುದ್ಧ ಕುಡಿವ ನೀರು, ರಸ್ತೆ ನಿರ್ಮಾಣ ಮತ್ತು ನೈರ್ಮಲೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ತಾಲೂಕಿನ ಹೊಸಳ್ಳಿಯಲ್ಲಿ ಕೆಕೆಆರ್ಡಿಬಿ ಅನುದಾನದಡಿ ಎಸ್ಸಿ ಕಾಲನಿಯಲ್ಲಿ 13.15 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. 2023ರೊಳಗೆ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿವ ನೀರು ಒದಗಿಸಲಾಗುತ್ತಿದ್ದು, ಜೆಜೆಎಂ ಕಾಮಗಾರಿ ಭರದಿಂದ ಸಾಗಿದೆ. ಕೆಕೆಆರ್ಡಿಬಿ ಮತ್ತು ಶಾಸಕರ ಅನುದಾನದಲ್ಲಿ ದಲಿತ ಕಾಲನಿಗಳಲ್ಲಿ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಕಾಮಗಾರಿ ನಿರ್ವಹಣೆಯನ್ನು ಜನರೇ ವಹಿಸಿಕೊಳ್ಳಬೇಕು ಎಂದರು.
ನಯೋಪ್ರಾ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಗ್ರಾಪಂ ಉಪಾಧ್ಯಕ್ಷೆ ಹನುಮವ್ವ, ಸದಸ್ಯರಾದ ಪದ್ದಮ್ಮ, ಬಸಪ್ಪ, ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಹುಲಿಗೆಮ್ಮನಾಯಕ, ಗ್ರಾಮೀಣ ಘಟಕದ ಅಧ್ಯಕ್ಷ ಚನ್ನಪ್ಪ ಮಳಗಿ, ಮುಖಂಡರಾದ ಹನುಮಮ್ಮ, ಚಂದ್ರಪ್ಪ ಹಿರೇಮನಿ, ಮೂಕಪ್ಪ, ನಾಗಪ್ಪ ಬಲ್ಕುಂದಿ, ವೀರೇಶ, ವಿರುಪಮ್ಮ, ಯಂಕಪ್ಪ, ಮಹಾದೇವ ಮೋಟ ಇತರರಿದ್ದರು.