ಗಂಗಾವತಿ: ಇತಿಹಾಸ ಪ್ರಸಿದ್ಧ ಆನೆಗೊಂದಿ ಭಾಗದಲ್ಲಿ ಪೊಲೀಸ್ ಔಟ್ಪೋಸ್ಟ್ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಎಸ್ಪಿಗೆ ಸೂಚಿಸಿದ್ದೇನೆ ಎಂದು ಬಳ್ಳಾರಿ ವಲಯ ಐಜಿಪಿ ಬಿ.ಎಸ್.ಲೋಕೇಶಕುಮಾರ ಹೇಳಿದರು.
ನಗರದ ಡಿವೈಎಸ್ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದರು. ಅಧಿಕಾರವಹಿಸಿಕೊಂಡ ನಂತರ ಬಳ್ಳಾರಿ ವಲಯದ ಎಲ್ಲ ಜಿಲ್ಲೆಗಳಿಗೆ ಸಂಚರಿಸುತ್ತಿದ್ದು, ಮಾಹಿತಿ ಪಡೆಯುತ್ತಿದ್ದೇನೆ. ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಮುಂದಿನ ತಿಂಗಳು ಸಾವಿರಾರು ಭಕ್ತರು ಬರುವ ಮಾಹಿತಿಯಿದ್ದು, ಸೂಕ್ತ ಬಂದೋಬಸ್ತ್ ಒದಗಿಸಲು ಪೊಲೀಸರಿಗೆ ಹೇಳಿದ್ದೇನೆ. ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಎಸ್ಪಿ ಅರುಣಾಂಗ್ಷುಗಿರಿಗೆ ಸೂಚಿಸಿದ್ದೇನೆ ಎಂದರು.
ಐತಿಹಾಸಿಕ ತಾಣಗಳಿಗೆ ಪ್ರವಾಸಿಗರು ಮತ್ತು ಧಾರ್ಮಿಕ ಕೇಂದ್ರಗಳಿಗೆ ಹೆಚ್ಚಿನ ಭಕ್ತರು ಬರಲಿದ್ದು, ಔಟ್ಪೋಸ್ಟ್ ಅಗತ್ಯವಿದೆ. ಎಪಿಎಂಸಿಯಲ್ಲೂ ತೆರೆಯುವ ಬಗ್ಗೆ ಪ್ರಸ್ತಾವನೆಯಿದ್ದು, ಮೇಲಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಇದಕ್ಕೂ ಮುನ್ನ ಉಪವಿಭಾವ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಪರಾಧ ಪ್ರಕರಣಗಳ ನಿಯಂತ್ರಣ ಕುರಿತು ಐಜಿಪಿ ಚರ್ಚಿಸಿದರು. ಎಸ್ಪಿ ಅರುಣಾಂಗ್ಷುಗಿರಿ, ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ, ಪಿಐಗಳಾದ ಟಿ.ವೆಂಕಟಸ್ವಾಮಿ, ಎನ್.ಮಂಜುನಾಥ, ಪಿಎಸ್ಐ ಶಾರದಮ್ಮ ಇತರರಿದ್ದರು.