ಗಂಗಾವತಿ: ಆನೆಗೊಂದಿ ಭಾಗದ ಪುರಾತನ ದೇವಾಲಯಗಳ ಜೀರ್ಣೋದ್ಧಾರ ಹಾಗೂ ಲೋಕಕಲ್ಯಾಣಾರ್ಥ ತಾಲೂಕಿನ ಪಂಪಾಸರೋವರದಲ್ಲಿ ಶ್ರೀಕೃಷ್ಣದೇವರಾಯ ರಾಜಮನೆತನದಿಂದ ಗುರುವಾರ ಮಹಾಗಣಪತಿ ಹೋಮ ಹಮ್ಮಿಕೊಳ್ಳಲಾಗಿತ್ತು.
ಕೇರಳದ ಅನಂತ ಪದ್ಮನಾಭ್ ದೇವಾಲಯದ ಅರ್ಚಕರಾದ ಟಿ.ಸತೀಶನ್, ನಂಬೂದ್ರಿಪಾದ್ ನೇತೃತ್ವದ ತಂಡದಿಂದ ಹೋಮ ನಡೆದಿದ್ದು, ಮಧ್ಯಾಹ್ನ ಪೂರ್ಣಾಹುತಿ ನೆರವೇರಿಸಲಾಯಿತು. ರಾಜವಂಶಸ್ಥ ರಾಜಾ ಶ್ರೀಕೃಷ್ಣದೇವರಾಯ ಹೋಮದ ವ್ಯವಸ್ಥೆ ಮಾಡಿದ್ದು, ಹೋಮ ಪ್ರದೇಶವನ್ನು ಹೂವು ಮತ್ತು ದೀಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ರಾಜಾ ಶ್ರೀಕೃಷ್ಣದೇವರಾಯ ಮಾತನಾಡಿ, ಪುರಾತನ ಕಾಲದಲ್ಲಿ ನಿರ್ಮಿಸಿರುವ ದೇವಾಲಯಗಳಲ್ಲಿ ಕೆಲವು ಹಾಳಾಗಿದ್ದು, ಪೂಜಾ ಕೈಂಕರ್ಯಕ್ಕೆ ತೊಂದರೆಯಾಗಿದೆ. ದೇವಾಲಯಕ್ಕೆ ದೇವತೆಗಳನ್ನು ಮತ್ತೆ ಆಹ್ವಾನಿಸುವುದರ ಜತೆಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಏನಾದರೂ ತಪ್ಪಾಗಿದ್ದರೆ ಮನ್ನಿಸಿ, ರಾಜ್ಯದ ಜನರಿಗೆ ಒಳಿತು ಮಾಡುವಂತೆ ಕೋರಿ ಹೋಮ ಕೈಗೊಂಡಿದ್ದು, ಮೂರ್ತಿ ಅಲಂಕಾರ, ನಿರಂತರ ಪಾರಾಯಣ ಮತ್ತು ಪ್ರಾರ್ಥನೆ ಸಲ್ಲಿಸಲಾಯಿತು ಎಂದರು.