ಗಂಗಾವತಿ: ಸಾಹಿತ್ಯದ ವಿಭಿನ್ನ ವಿಚಾರಗಳನ್ನು ಹಂಚಿಕೊಳ್ಳಲು ಕವಿಗೋಷ್ಠಿ ಪೂರಕವಾಗಿದ್ದು, ಕ್ರಿಯಾತ್ಮಕವಾದ ಸಾಹಿತ್ಯ ಕೃಷಿ ಸಂಘಟನೆಗಳಿಂದಾಗುತ್ತಿವೆ ಎಂದು ಎಚ್ಆರ್ಎಸ್ಎಂ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ವಿಜಯಾನಂದ ವಗ್ಗೆ ಹೇಳಿದರು.
ಶ್ರೀರಾಮ ಮಂದಿರ ತೀರ್ಥ ಕ್ಷೇತ್ರ ನಿಧಿ ಸಮರ್ಪಣಾ ಅಭಿಯಾನ ನಿಮಿತ್ತ ನಗರದ ಜೆಸ್ಕಾಂ ಆವರಣದ ಗಣೇಶ ದೇವಾಲಯದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತಾಲೂಕು ಮತ್ತು ಜಿಲ್ಲಾ ಸಮಿತಿ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ವಿಭಾಗ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಕವನ, ಕಾದಂಬರಿ ಮತ್ತು ರಂಗಕೃತಿಗಳ ಅಧ್ಯಯನದ ಮೂಲಕ ಸಾಹಿತ್ಯ ಕೃಷಿ ಕೈಗೊಳ್ಳಬೇಕಿದೆ. ವೇದಿಕೆಗಳ ಮೂಲಕ ಕಾವ್ಯಾಸಕ್ತರಿಗೆ ಪ್ರೋತ್ಸಾಹ ನೀಡಬೇಕಿದ್ದು, ಕರೊನಾ ಸಂದರ್ಭದಲ್ಲೂ ತಾಲೂಕಿನಲ್ಲಿ ಆನ್ಲೈನ್ ಗೋಷ್ಠಿ ಏರ್ಪಡಿಸುವ ಮೂಲ ಸಾಹಿತ್ಯ ಚಟುವಟಿಕೆ ಗಟ್ಟಿಗೊಳಿಸಲಾಯಿತು ಎಂದರು.
ಪುಸ್ತಕ ಪ್ರಾಧಿಕಾರ ಸದಸ್ಯ ಅಶೋಕ ರಾಯ್ಕರ್ ಮಾತನಾಡಿ, ಅಯೋಧ್ಯೆಯಂತೆ ಹನುಮನನಾಡು ಪ್ರಾಮುಖ್ಯತೆ ಪಡೆದಿದ್ದು, ಇಲ್ಲಿನ ಕಿಷ್ಕಿಂದ ಪ್ರದೇಶ ರಾಮಾಯಣದಲ್ಲಿ ಉಲ್ಲೇಖವಿದೆ. ಶ್ರೀರಾಮ ಭಾರತೀಯ ಸಂಸ್ಕೃತಿ ಆತ್ಮವಾಗಿದ್ದು, ಅಯೋಧ್ಯೆಯಲ್ಲಿ ಮಂದಿರ ಮಾತ್ರವಲ್ಲ, ಗ್ರಂಥಾಲಯ, ಗುರಕುಲ ಸೇರಿ ವಿಭಿನ್ನ ಚಿಂತನೆಗಳ ಸಮೂಹ ಸೃಷ್ಟಿಯಾಗಲಿದೆ ಎಂದರು. ಅಯೋಧ್ಯೆಯಲ್ಲಿ ರಾಮ ಮಂದಿರ, ಹೃದಯದಲ್ಲಿ ರಾಮ ಚಂದಿರ ವಿಷಯ ಕುರಿತು ರಾಯಚೂರು, ಬಳ್ಳಾರಿ, ಹೊಸಪೇಟೆ ಮತ್ತು ಕೊಪ್ಪಳ ಜಿಲ್ಲೆಯ ಕವಿಗಳು ಕವನ ವಾಚಿಸಿದರು.
ಮಕ್ಕಳ ತಜ್ಞ ಡಾ.ಅಮರೇಶ ಪಾಟೀಲ್, ತಾಲೂಕು ಘಟಕದ ಪದಾಧಿಕಾರಿಗಳಾದ ನಾಗಪ್ಪ ಬಡಿಗೇರ್, ಶರಣಪ್ಪ ತಳ್ಳಿ ಇತರರಿದ್ದರು.